ಬ್ರಹ್ಮಾವರ ತಾಲೂಕು ಕೇಂದ್ರವಾದರೂ ಸಿಗುವುದಿಲ್ಲ ಕಡತಗಳು; ಉಡುಪಿಗೆ ಹೋಗಬೇಕಿದೆ ಜನರು
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ ತಾಲೂಕು ಕೇಂದ್ರ ಆಗಬೇಕು ಎಂದು ಹಲವಾರು ಹೋರಾಟ ಜನಾಂದೋಲನ ಮಾಡಿ ಪಡೆದ ಬ್ರಹ್ಮಾವರ ತಾಲೂಕು ರಚನೆಯಾಗಿ ಮೂರುವರೆ ವರ್ಷ ಕಳೆದರೂ ಹಲವಾರು ಅತೀ ಅಗತ್ಯದ ಕಡತಗಳು ಮಾತ್ರ ಇನ್ನೂ ಕೂಡಾ ಉಡುಪಿಯಲ್ಲೆ ಉಳಿದುಕೊಂಡಿದೆ. ಬಹುತೇಕ ಗ್ರಾಮೀಣ ಭಾಗದಿಂದ 30 ಕಿಮಿ ದೂರದ ತನಕ ಬರುವ ಹಲವಾರು ಕೆಲಸಗಳಿಗೆ ಬೇಕಾಗುವ ಕಡತಗಳು ಇಲ್ಲಿ ಇಲ್ಲದ ಕಾರಣ ಉಡುಪಿಗೆ ಅಲೆದಾಡುವ ಸ್ಥಿತಿಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧ ಪಟ್ಟಂತೆ ತಾಲೂಕಿನ ಭೂಸುಧಾರಣೆ, ಜನನ, ಮರಣ, ದರ್ಕಾಸ್ತು, ಪಡಿತರ ಚೀಟಿಯ ಬದಲಾವಣೆಗೆ ತಿದ್ದುಪಡಿ ಸೇರಿದಂತೆ ಅನೇಕ ಕೆಲಸಗಳಿಗೆ ದೂರದ ಉಡುಪಿಗೆ ಹೋಗಬೇಕಾಗಿದೆ. ಕಳೆದ ಕೆಲವು ವರ್ಷದ ಹಿಂದೆ ಬ್ರಹ್ಮಾವರದಲ್ಲಿ ಹೊಸದಾಗಿ ತಾಲೂಕು ಕಛೇರಿ ಕಟ್ಟಡ ರಚನೆಯಾದರೂ ಕೂಡಾ ತಾಲೂಕಿಗೆ ಬೇಕಾಗುವಷ್ಟು ಕಡತಗಳನ್ನು ಇರಿಸಿಕೊಳ್ಳುವಷ್ಟು ಜಾಗ ಇಲ್ಲಿ ಇಲ್ಲ ಎನ್ನುವ ಕಾರಣ ಹಲವಾರು ವರ್ಷದಿಂದ ಕೇಳಿಬಂದಿದೆ. ಇನ್ನೊಂದೆಡೆಯಲ್ಲಿ ಹಳೆ ಪ್ರವಾಸಿ ಮಂದಿರದ ಬಳಿ ಮಿನಿವಿಧಾನ ಸೌಧ ಕಾಮಗಾರಿ ನಡೆಯುತ್ತಿದ್ದು, ಅದು ಮುಕ್ತಾಯಗೊಂಡ ಬಳಿಕ ಅನೇಕ ಕಛೇರಿಗಳು ಅಲ್ಲಿ ವರ್ಗಾವಣೆ ಆಗುವಾಗ ಕಡತಗಳು ಬರಲಿವೆ ಎನ್ನುವ ಹೇಳಿಕೆ ಕೇಳಿಬರುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರದ ತಾಲೂಕಿಗೆ ಸಂಬಂಧ ಪಟ್ಟ ಕಡತಗಳು ಬ್ರಹ್ಮಾವರದಲ್ಲಿಯೇ ಸಿಗುವಂತೆ ಆಗಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆ ಮತ್ತು ಒತ್ತಾಯ ಕೇಳಿ ಬಂದಿದೆ.
ಸರಕಾರ ಮತ್ತು ಅಧಿಕಾರಿಗಳಿಗೆ ಇಚ್ಚಾ ಶಕ್ತಿಯ ಕೊರತೆ ಕಂಡು ಬರುತ್ತದೆ. ಇಲ್ಲಿ ಈಗಿರುವ ಹೊಸ ಕಟ್ಟಡ ರಚನೆಯಾಗುವಾಗ ನಾನೂ ಕೂಡಾ ಗಮನ ಸೆಳೆದಿದ್ದೇನೆ. ಈಗಿರುವ ಮಾದರಿಗಿಂತ 2 ಮಹಡಿ ಮಾಡುವಂತೆ ಜಾಗ ಕೂಡಾ ಸಿಗುತ್ತಿತ್ತು. ಆದರೆ ಇಲಾಖೆ ಅವರು ಕಂಡುಕೊಂಡ ಮಾದರಿಯಲ್ಲಿ ಮಾಡಿದೆ. ಬ್ರಹ್ಮಾವರ ತಾಲೂಕಿಗೆ ಸಂಬಂದಿಸಿದ ಕಡತಗಳನ್ನು ಉಡುಪಿಯಿಂದ ಕೂಡಲೇ ವರ್ಗಾಯಿಸುವಂತೆ ಕರ್ನಾಟಕ ಸರಕಾರ ಕಂದಾಯ ಕಾರ್ಯದರ್ಶಿಗಳಿಗೆ ಮತ್ತು ಗ್ರಾಮೀಣ ಮೂಲ ಭೂತ ಸೌಲಭ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಕರಿಗೆ ಪತ್ರವನ್ನು ನೀಡಲಾಗಿದೆ. ಬಿ.ಭುಜಂಗ ಶೆಟ್ಟಿ ಬ್ರಹ್ಮಾವರ, ಮಾಜಿ ಉಡುಪಿ ಜಿಲ್ಲಾ ಪಂಚಾಯತಿ ಅಧ್ಯಕ್ಷ
ಬ್ರಹ್ಮಾವರ ತಾಲೂಕು ಕಛೇರಿಯಲ್ಲಿ ಕಡತಗಳನ್ನು ಇರಿಸಲು ಸ್ಥಳದ ಸಮಸ್ಯೆಯಿಂದಾಗಿ ಬ್ರಹ್ಮಾವರದ ಅನೇಕ ಕಡತಗಳು ಉಡುಪಿ ತಾಲೂಕು ಕಛೇರಿಯಲ್ಲಿದೆ. ಕೆಲವೊಂದು ಕೋಟದಲ್ಲಿದೆ. ಮಿನಿ ವಿಧಾನ ಸೌಧ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಬೇಗ ಎಲ್ಲವನ್ನೂ ಬ್ರಹ್ಮಾವರಕ್ಕೆ ತರಲಾಗುವುದು. ಸಾರ್ವಜನಿಕರು ಅಲ್ಲಿಯವರೆಗೆ ಸಹಕರಿಸಬೇಕು.ರಾಜಶೇಖರ ಮೂರ್ತಿ, ಬ್ರಹ್ಮಾವರ ತಹಶೀಲ್ದಾರ