ವರದಿ: ಶಫೀ ಉಚ್ಚಿಲ
ಉಚ್ಚಿಲ : ಇಲ್ಲಿನ ರಾ.ಹೆ. 66ರಿಂದ ಪಣಿಯೂರು – ಮುದರಂಗಡಿ ಸಂಪರ್ಕದ ಲೋಕೋಪಯೋಗಿ ರಸ್ತೆ ಹೊಂಡಾ ಗುಂಡಿಯಾಗಿದ್ದು,ಇಲಾಖೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಯುವಕರು ಶನಿವಾರ ಹೊಂಡಾದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟಿಸಿ ಬಳಿಕ ತಾತ್ಕಾಲಿಕ ಶ್ರಮದಾನ ನಡೆಸಿದರು.
ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಕಾಟಾಚಾರಕ್ಕೆ ಬಿಡಿಸಲಾದ ಅಸಮರ್ಪಕವಾದ ಚರಂಡಿಯಿಂದಾಗಿ ನೀರು ಹರಿದು ಹೋಗಲಾಗದೆ ಅಲ್ಲಲ್ಲಿ ಕೊಳಚೆ ನೀರು ಶೇಖರಣೆಗೊಳ್ಳುತ್ತಿದೆ. ಜೋರಾಗಿ ಮಳೆ ಸುರಿದಾಗ ಕೊಳಚೆ ನೀರು ರಸ್ತೆಯಲ್ಲಿ ಹರಿದು ಗುಂಡಿಗಳಾಗಿ ವಾಹನ ಸವಾರರು, ಸಾರ್ವಜನಿಕರು ಸಂಕಟ ಅನುಭವಿಸುವಂತಾಗಿದೆ. ದ್ವಿಪಥ ರಸ್ತೆ ನಿರ್ಮಾಣದ ಹೆಸರಿನಲ್ಲಿ ನಿರ್ಮಿಸಲಾದ ಮೋರಿಯ ಇಕ್ಕೆಲಗಳಲ್ಲಿ ಹೊಂಡಗಳಾಗಿದ್ದು,ಅನೇಕರು ಇದರಿಂದಾಗಿ ಬಿದ್ದು ಗಾಯಗೊಂಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಯವಕರು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತಾತ್ಕಾಲಿಕ ಶ್ರಮದಾನ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಬ್ದುಲ್ ರಝಾಕ್ ಮಾತನಾಡಿ,ಇಲ್ಲಿನ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ. ದಿನ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.ಅನೇಕರು ಗಾಯಗೊಂಡಿದ್ದಾರೆ. ಸಂಬಂಧಿತ ಇಲಾಖೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement. Scroll to continue reading.