ಕರಾವಳಿ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಸರಕಾರ ಸಾಲ ಕೊಟ್ಟಿದೆ ಹೊರತು ಅನುದಾನ ಕೊಟ್ಟಿಲ್ಲ; ಸಾಲಕ್ಕಿಂತ 3 ಪಟ್ಟು ಬಡ್ಡಿಯಾಗಿದೆ : ಬೈಕಾಡಿ ಸುಪ್ರಸಾದ್ ಶೆಟ್ಟಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಸರಕಾರ ಈ ತನಕ ಸಾಲವನ್ನೇ ಕೊಟ್ಟಿದೆ, ಹೊರತು ಅನುದಾನ ಕೊಟ್ಟಿಲ್ಲ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.

ಶನಿವಾರ ಸಂಜೆ ಬ್ರಹ್ಮಾವರ ಮದರ್ ಪ್ಯಾಲೇಸ್‍ನಲ್ಲಿ ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಳಿವು-ಉಳಿವು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೋಯಿಲಿ, ಎಸ್. ಎಂ ಕೃಷ್ಣ , ಬಿ. ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳು ಸಾಲವನ್ನು ನೀಡಿ ಇದೀಗ ಸಾಲಕ್ಕಿಂತ 3 ಪಟ್ಟು ಬಡ್ಡಿಯಾಗಿದೆ ಎಂದರು.

Advertisement. Scroll to continue reading.

ಹದಿನೈದು ವರ್ಷಗಳಿಂದ ಮುಚ್ಚಿ ಯಂತ್ರಗಳಿಗೆ ತುಕ್ಕು ಹಿಡಿದು ಸಾಕಷ್ಟು ತೀರಿಸಲಾಗದ ಸಾಲ ಇರುವಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ರೈತರು ಮತ್ತು ಸರಕಾರ ಹೇಗೆ ಸ್ಪಂದಿಸಲಿದೆ ಎನ್ನುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಸರಕಾರ ಮತ್ತು ಹಣಕಾಸು ಸಂಸ್ಥೆ ಅದೆಷ್ಟೋ ರೈತರ ಸಾಲ ಮನ್ನಾ ಮಾಡಿದೆ ಅದೇ ರೀತಿ ಇದು ಕೂಡಾ ರೈತರ ಹಿತಾಸಕ್ತಿಗೆ ಮಾಡಲಾದ ಸಂಸ್ಥೆ. ಇದನ್ನು ಮನ್ನಾ ಮಾಡಬೇಕು ಮತ್ತು ಮುಂದಿನ ನಮ್ಮಯೋಜನೆಗೆ 200 ಕೋಟಿ ಸಾಲವನ್ನು ನೀಡುವಂತೆ ಯೋಜನೆ ಸಿದ್ಧ ಪಡಿಸಿದ್ದೇವೆ ಎಂದರು.

ಸಕ್ಕರೆ ಕಾರ್ಖಾನೆಗೆ 110 ಎಕ್ರೆ ಜಾಗ ಇದೆ, ಹಿಂದೆ ನೀರಿನ ಸಮಸ್ಯೆ ಇತ್ತು. ಈಗ ವಾರಾಹಿ ನೀರು ಉಡುಪಿ ಜಿಲ್ಲೆಗೆ ಸಿಗುತ್ತಿದೆ. ಭತ್ತದ ಬೆಳೆಯಿಂದ ಸರಿಯಾದ ದರ ಇಲ್ಲದ ಕಾರಣ ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆಯಲು ರೈತರು ಸಿದ್ಧರಿದ್ದಾರೆ. ಕಾರ್ಖನೆಯಲ್ಲಿ ಕೇವಲ ಸಕ್ಕರೆ ಮಾತ್ರವಲ್ಲದೆ, ಎಥೆನಾಲ್ ಉತ್ಪಾದನೆಯ ಜತೆಗೆ ಬೆಲ್ಲದ ಆಲೆಮನೆ, ಗಾಣದ ತೆಂಗಿನ ಎಣ್ಣೆ ಉತ್ಪಾದನೆ, ಭತ್ತ ಖರೀದಿ, ಭತ್ತದ ಮಿಲ್, ವಾಣಿಜ್ಯ ಸಂಕೀರ್ಣ ನಿರ್ಮಾಣ, ಹಿಟ್ಟು ತಯಾರಿಕೆ ಘಟಕ, ಗೋಡಾಮು ನಿರ್ಮಾಣ ಸೇರಿದಂತೆ ರೈತರಿಗೆ ಪೂರಕವಾದ ವಿವಿಧ ಯೋಜನೆಗಳನ್ನು ರೂಪಿಸಲಿದ್ದೇವೆ ಎಂದರು.

ಎಥೆನಾಲ್ ಘಟಕ ಸ್ಥಾಪನೆ:

ರಾಜ್ಯದಲ್ಲಿ 152 ಎಥೆನಾಲ್ ಘಟಕ ಸ್ಥಾಪನೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ನೊಂದಾವಣೆಯಾಗಿದೆ.
ಎಥೆನಾಲ್ ಘಟಕ ಸ್ಥಾಪನೆಗೆ ಸರಕಾರದಿಂದ ಹಾಗೂ ಅರ್ಥಿಕ ಸಂಸ್ಥೆಗಳು ನೆರವು ನೀಡಬೇಕೆಂಬ ಸೂಚನೆ ಇದೆ. ಘಟಕಕ್ಕೆ ಅಗತ್ಯವಿರುವ ಜಾಗ ಹಾಗೂ ಮೂಲಸೌಕರ್ಯಗಳು ನಮ್ಮಲ್ಲಿ ಇದೆ .
ಈಗ ಇರುವ ಸಾಲ ಬಡ್ಡಿ ಸೇರಿ 85 ಕೋಟಿ. ಕೆಲವು ಸಾಲವನ್ನು ಮನ್ನಾ ಮಾಡುವಂತೆ ಕಾನೂನು ಹೋರಾಟ ನಡೆಯುತ್ತಿದೆ. ಹೊಸ ಕಾರ್ಖಾನೆ ನಿರ್ಮಿಸಲು 150ಕೋಟಿ ರೂ ಬೇಕಾಗುತ್ತದೆ. ಈಗಿರುವ ಯಂತ್ರೋಪಕರಣ ಗುಜರಿಗೆ ಹಾಕುವಾಗ 4-5 ಕೋಟಿ ಆದಾಯ ಬರಲಿದೆ. ವಿದೇಶಿ ಉದ್ಯಮಿಗಳಿಂದ ಷೇರ್ ಹೂಡಿಕೆಯ ಮೂಲಕ ಅರ್ಥಿಕ ನೆರವು ಪಡೆಯಲು ತಯಾರಿ ನಡೆದಿದೆ. 2023ರ ಅಂತ್ಯದೊಳಗೆ ಕಾರ್ಖಾನೆ ಪುನಾರಂಭಗೊಳಿಸುವ ನಮ್ಮ ಇಚ್ಚಾ ಶಕ್ತಿಗೆ ಮಾಧ್ಯಮ ನಮಗೆ ಸಹಕಾರಿಯಾಗಬೇಕು ಎಂದರು.

ಕಾರ್ಖಾನೆ ಜಾಗ ಮಾರಾಟ ಮಾಡಲ್ಲ:

ಈ ವರ್ಷ ಕಾರ್ಖಾನೆಯಲ್ಲಿ ಎರಡು ತಿಂಗಳು ಮಾತ್ರ ಮಾಡಲಾದ ಆಲೆಮನೆಯಿಂದ ತಯಾರಾದ ಬೆಲ್ಲದಿಂದ 1.80 ಲಕ್ಷ ಲಾಭ ಬಂದಿದೆ.

Advertisement. Scroll to continue reading.

ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ ರೈತರಿಗೆ ಬೇಕಾಗುವ ಸಲಕರಣೆಗೆ ಮಾರುಕಟ್ಟೆ ವಾಣಿಜ್ಯ ಮಳಿಗೆ ಮಾಡಿ ಅದರಿಂದ ಲಾಭದ ನಿರೀಕ್ಷೆಯಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯ ಜಾಗವನ್ನು ಮಾರಾಟ ಮಾಡುವುದಿಲ್ಲ ಎಂದರು.

ಉಡುಪಿ ಜಿಲ್ಲೆಯ 5 ಶಾಸಕರು, ಸಚಿವರು, ಎರಡು ಕ್ಷೇತ್ರಗಳ ಸಂಸದರು ಜತೆಯಾಗಿ ಸಭೆ ನಡೆಸಿ ಕಾರ್ಖಾನೆ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಉಮಾನಾಥ ಶೆಟ್ಟಿ, ನಿರ್ದೇಶಕ ಆಸ್ತಿಕ್ ಶಾಸ್ತ್ರಿ, ಸಂತೋಷ್ ಶೆಟ್ಟಿ ಬಾಲಾಡಿ, ಸನ್ಮತ್ ಹೆಗ್ಡೆ, ಸುಬ್ಬ ಬಿಲ್ಲವ, ರತ್ನಾಕರ ಗಾಣಿಗ, ಕಾರ್ಖಾನೆಯ ಮ್ಯಾನೇಜರ್ ಗೋಪಾಲಕೃಷ್ಣ, ಕಾನೂನು ಸಲಹೆಗಾರ ವಿಜಯ ಹೆಗ್ಡೆ, ಉದ್ಯಮಿ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರು ಸಂವಾದದಲ್ಲಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com