ಉಡುಪಿ : ಪಣಿಯಾಡಿಯ ಶೇಷಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವರ ದಿವ್ಯ ಸನ್ನಿಧಿಯಲ್ಲಿ ಶನಿವಾರದಂದು ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ರ ನೇತೃತ್ವದಲ್ಲಿ ಋಗ್ ಉಪಾಕರ್ಮ ಸಾಂಗವಾಗಿ ನೆರವೇರಿತು. ಬಳಿಕ ಶ್ರೀ ದೇವರಿಗೆ ಅನಂತ ತುಳಸಿ ಅರ್ಚನೆ ರಾತ್ರಿ ದುರ್ಗಾ ಪೂಜೆ ಸುಸಂಪನ್ನಗೊಂಡಿತು.
ನೂಲ ಹುಣ್ಣಿಮೆಯ ದಿನವಾದ ಭಾನುವಾರ ಯಜುರ್ ಉಪಾಕರ್ಮ ಶ್ರೇಷ್ಟ ಋತ್ವಿಜರು ಹಾಗೂ ವೇದಮೂರ್ತಿಗಳಾದ ರವಿ ಐತಾಳ್, ರಾಘವೇಂದ್ರ ಭಟ್, ಜ್ಯೋತಿಷಿ ಗೋಪಾಲಕೃಷ್ಣ ಜೋಯ್ಸ, ರಾಮಚಂದ್ರ ಜೋಯ್ಸ, ಪ್ರವೀಣ ಮತ್ತು ಗೋಪಾಲ ಆಚಾರ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಪುತ್ತಿಗೆ ವೇದ ಪಾಠಶಾಲೆಯ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.