ಕರಾವಳಿ

ಉಡುಪಿ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಫೀವರ್ ಸರ್ವೆ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

0

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವನ್ನು ನಿಯಂತ್ರಿಸಲು ಶೀಘ್ರದಲ್ಲಿ ಕೋವಿಡ್ ಪೀಡಿತರನ್ನು ಪತ್ತೆ ಹಚ್ಚಿ, ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು ಅಗತ್ಯವಾಗಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಫೀವರ್ ಸರ್ವೇ ಕಾರ್ಯಕ್ರಮ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಕೋವಿಡ್ ನಿಯಂತ್ರಣ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೆಪ್ಟಂಬರ್ 20 ರಿಂದ 22 ರ ವರೆಗೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ಭೇಟಿ ನೀಡಿ, ಜ್ವರ ಇರುವವರ ಮಕ್ಕಳು, ವೃದ್ದರು ಮತ್ತು ಎಲ್ಲಾ ಸಾರ್ವಜನಿಕರ ಕುರಿತು ಮಾಹಿತಿ ಸಂಗ್ರಹಿಸಿ. ಜ್ವರ ಇದ್ದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಸೋಂಕು ಕಂಡು ಬಂದವರನ್ನು ಆರೋಗ್ಯವಂತರಿಂದ ಪ್ರತ್ಯೇಕಿಸುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಸಾದ್ಯವಿದೆ. ಸಾರ್ವಜನಿಕರು ಸರ್ವೆ ಸಮಯದಲ್ಲಿ ತಮ್ಮ ಆರೋಗ್ಯ ಕುರಿತು ಅಗತ್ಯ ಮಾಹಿತಿ ನೀಡುವಂತೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚು ಮಾಡುವಂತೆ ತಿಳಿಸಿದ ಅವರು, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು, ರೋಗ ಲಕ್ಷಣಗಳಿರುವವರು ಮತ್ತು ಪ್ರಯಾಣ ಹಿಸ್ಟರಿ ಇರುವವರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿ, ಹೋಂ ಐಸೋಲೇಶನ್‍ನಲ್ಲಿ ಇರುವವರು ಮತ್ತು ಅವರ ಪ್ರಾಥಮಿಕ ಸಂಪರ್ಕಿತರು ಕಂಟೈನ್‍ಮೆಂಟ್ ಝೋನ್ ಹೊರಗೆ ತಿರುಗಾಡದಂತೆ ಎಚ್ಚರಿಕೆ ವಹಿಸಿ ಎಂದರು.
ಪಾಸಿಟಿವ್ ಬಂದ ವ್ಯಕ್ತಿಯ ಸಂಪೂರ್ಣ ವಿವರದ ದಾಖಲೆಗಳನ್ನು ಆತ ವಾಸಿಸುವ ಪ್ರಾಥಮಿಕ ಆರೋಗ್ಯ ಕೆಂದ್ರದ ವ್ಯಾಪ್ತಿಯಲ್ಲಿ ಸಂಗ್ರಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಆತನನ್ನು ಪರೀಕ್ಷಿಸಿದ ದಿನಾಂಕ. ರೋಗ ಲಕ್ಷಣಗಳು, ಆರೋಗ್ಯ ಸ್ಥಿತಿಗತಿ, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ದಾಖಲಿಸಿದ ಕುರಿತ ವಿವರಗಳು, ಗುಣಮುಖನಾದ ದಿನಾಂಕ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿಡುವಂತೆ ಸೂಚಿಸಿದರು.
ಲಸಿಕೆ ನೀಡುವ ಸಮಯದಲ್ಲಿ ಪ್ರತಿಯೊಂದು ಗ್ರಾಮ ಮತ್ತು ವಾರ್ಡ್‍ಗಳಲ್ಲಿ ಲಸಿಕೆ ಪಡೆಯಲು ಬಾಕಿ ಇರುವವರು ಮಾಹಿತಿ ಸಂಗ್ರಹಿಸಿ, ಬಾಕಿ ಇರುವ ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಿ, ಲಸಿಕಾ ಅಭಿಯಾನ ಏರ್ಪಡಿಸುವಾಗ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸ್ವ-ಸಹಾಯ ಸಂಘಗಳ ನೆರವು ಪಡೆಯುವದರಿಂದ ಅತ್ಯಂತ ಯಶಸ್ವಿಯಾಗಿ ಲಸಿಕೆಯ ಸಂಪೂರ್ಣ ಗುರಿ ಸಾಧನೆ ಸಾಧ್ಯ ಎಂದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿನ ವರದಿಯಾಗುವ ಐಎಲ್‍ಐ ಮತ್ತು ಸಾರಿ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ, ಅವರನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ಅಲ್ಲದೇ ಔಷಧ ಅಂಗಡಿಗಳಿಂದ ಕೋವಿಡ್ ರೋಗ ಲಕ್ಷಣಗಳಿಗೆ ಔಷಧ ಖರೀದಿಸುವವರ ಕುರಿತ ಸಹ ಮಾಹಿತಿ ಸಂಗ್ರಹಿಸಿ ಅವರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಮಾತನಾಡಿ, ಕೋವಿಡ್ ಪೀಡಿತರು ಮನೆಯಿಂದ ಹೊರಗೆ ತಿರುಗಾಡುವುದು, ಕೋವಿಡ್ ಕೇರ್ ಸೆಂಟರ್‍ಗಳ ಕುರಿತು ಮಾಹಿತಿ, ಕೋವಿಡ್ ಕುರಿತು ಯಾವುದೇ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ಹಾಗೂ ಅಗತ್ಯ ಮಾಹಿತಿಗಾಗಿ ಹೆಲ್ಪ್‍ಲೈನ್‍ನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಹೆಲ್ಪ್‍ಲೈನ್ ಸಂಖ್ಯೆಯನ್ನು ನೀಡುವಂತೆ ಹಾಗೂ ಲಸಿಕಾ ಅಭಿಯಾನ ಮತ್ತು ಹೋಂ ಐಸೋಲೇಶನ್ ದಾಖಲು, ಕಂಟೈನ್ ಮೆಂಟ್ ಝೋನ್ ರಚಿಸುವ ಸಂದರ್ಭದಲ್ಲಿ ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್‍ಗಳ ನೆರವು ಪಡೆಯುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com