ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕಾಳಾವರ ಗ್ರಾಮದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ `ಶ್ರೀ ವರಲಕ್ಷ್ಮೀ ನಿಲಯ’ ನೂತನ ಗೃಹದ ಹಸ್ತಾಂತರ ಸಮಾರಂಭ ಶುಕ್ರವಾರ ಜರುಗಿತು.
ಉದ್ಯಮಿ ಹಾಗೂ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರ ತಂದೆ ತಾಯಿ ಬಾಬು ಪೂಜಾರಿ ಹಾಗೂ ಮಂಜಮ್ಮ ದಂಪತಿಗಳು ನೂತನ ಗೃಹವನ್ನು ಉದ್ಘಾಟಿಸಿದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನೂತನ ಗೃಹದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭಹಾರೈಸಿ ಗೋವಿಂದ ಬಾಬು ಪೂಜಾರಿ ಅವರು ದೇವರು ಮೆಚ್ಚುವ ಕಾರ್ಯ ಮಾಡಿದ್ದಾರೆ. ಅವರಿಗೆ ಶುಭವಾಗಲಿ ಎಂದರು.
Advertisement. Scroll to continue reading.
ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ಗೋವಿಂದ ಪೂಜಾರಿ ಅವರು ಸವಿತಾ ಅವರಿಗೆ ಮನೆಯ ಬೀಗದ ಕೈ ಹಸ್ತಾಂತರಿಸಿದರು. ಬಳಿಕ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಟ್ರಸ್ಟೀ ಮೂಲಕ ನಿರ್ಮಿಸಲಾಗಿರುವ ಐದನೇ ಮನೆ ಇದಾಗಿದೆ. ಮತ್ತಷ್ಟು ಕಾರ್ಯಗಳು ಟ್ರಸ್ಟ್ ಮೂಲಕ ನಡೆಯಲಿದೆ ಎಂದರು.
ಈ ವೇಳೆ ಗೋವಿಂದ ಬಾಬು ಪೂಜಾರಿ ಅವರನ್ನು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಪಂಚಾಯತ್ ಸದಸ್ಯರು, ಬಿಲ್ಲವ ಸಮಾಜದ ಮುಖಂಡರು ಉಪಸ್ಥಿತರಿದ್ದರು.