ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬ್ರಹ್ಮಾವರ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀಮಾರಿಯಮ್ಮ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣೇಶ್ ಕೃಪಾ ಸಭಾಭವನ ಪಾರಂಪಳ್ಳಿ ಇಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಬ್ರಹ್ಮಾವರತಾಲೂಕಿನ ಯೋಜನಾಧಿಕಾರಿ ದಿನೇಶ್ ಶೇರಿಗಾರ್ ಉದ್ಘಾಟಿಸಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಸಂಘದ ಸದಸ್ಯರು ವ್ಯವಹಾರದಲ್ಲಿ ಶಿಸ್ತನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದರು,
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೋಟ ವಕೀಲರಾದ ಹೆಚ್ ಪ್ರಮೋದ್ ಹಂದೆ ಮಾತನಾಡಿ ಜ್ಞಾನ ವಿಕಾಸ ಕೇಂದ್ರದಲ್ಲಿ ಅಳವಡಿಸಿಕೊಳ್ಳಲಾದ ಶಿಸ್ತು ಕುಟುಂಬದ ಪ್ರತಿಯೊಂದು ಸದಸ್ಯರಲ್ಲಿ ಬೆಳೆಸಬೇಕು. ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ದೌರ್ಜನ್ಯ, ಡ್ರಗ್ಸ್ ಮಾಫಿಯಾ, ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಶಿಕ್ಷಕರು ಮತ್ತು ಸಾಹಿತಿಗಳು ಇವರು ಜ್ಞಾನವಿಕಾಸ ಮಹಿಳೆಯರ ಬದುಕಿಗೆ ಬಣ್ಣವನ್ನು ನೀಡುತ್ತಿದೆ, ಶಿಸ್ತು ಮತ್ತು ಆತ್ಮವಿಶ್ವಾಸ ಕಲಿಯಲು ಜ್ಞಾನವಿಕಾಸ ದಿಂದ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣದ ಬೇರೆಬೇರೆ ವ್ಯಾಖ್ಯಾನದ ಮೂಲಕ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಸವಿತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಸುಲೋಚನ, ಸೇವಾ ಪ್ರತಿನಿಧಿ ಶ್ಯಾಮಲಾ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಪ್ರಯುಕ್ತ ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಚುರಪಡಿಸಿದರು.ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ ನಿರೂಪಿಸಿ, ಸಂಯೋಜಕಿ ಸುಜಾತಾ ಸ್ವಾಗತಿಸಿ, ರೇಖಾ ವಂದಿಸಿದರು.