ವರದಿ : ದಿನೇಶ್ ರಾಯಪ್ಪನಮಠ
ಕೋಟ: ‘ಮಾತಾಡ್ ಮಾತಾಡ್ ಕನ್ನಡ’ ಎನ್ನುವ ಕಾರ್ಯಕ್ರಮ ಇಡೀ ರಾಜ್ಯದಲ್ಲೇ ನಡೆಯುತ್ತಿದೆ. ಕರ್ನಾಟಕದಲ್ಲಿ ಅನ್ಯ ಭಾಷೆ ಬಳಸದೇ ಕನ್ನಡದಲ್ಲೇ ಮಾತನಾಡುವ ಸ್ಪರ್ಧೆ ಏರ್ಪಡಿಸುವ ಸಂದರ್ಭ ಒದಗಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯೂ ಹೌದು. ಇನ್ನೊಂದು ಬಗೆಯಲ್ಲಿ ಆಲೋಚಿಸುವುದಿದ್ದರೆ ಕನ್ನಡವನ್ನು ಕನ್ನಡ ನೆಲದಲ್ಲಿ ಗಟ್ಟಿಗೊಳಿಸುವ ಒಕ್ಕೊರಲ ಕೂಗು ಹೌದು ಎನ್ನುವುದು ಸಂತೋಷದ ಸಂಗತಿಯೂ ಹೌದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಾಸಕರಾದ ಮಾನ್ಯ ಸುನೀಲ್ ಕುಮಾರ್ ಅವರು ಈ ವರ್ಷ ಕನ್ನಡಕ್ಕಾಗಿ ನಾವು ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡ ತತ್ಕ್ಷಣವೇ ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್, ತೆಕ್ಕಟ್ಟೆ ಹಾಗೂ ಯಶಸ್ವಿ ಕಲಾವೃಂದ ‘ಕನ್ನಡ ಸಪ್ತಾಹ’ ವಾರವಿಡೀ ಕನ್ನಡ ಪರ ಕಾರ್ಯಕ್ರಮವನ್ನು ಏರ್ಪಡಿಸಿ ಸಂಪೂರ್ಣ ಬೆಂಬಲವನ್ನು ತೋರ್ಪಡಿಸಿದ್ದಾರೆ ಎಂದು ಕನ್ನಡದ ಕಟ್ಟಾಳು, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಉಭಯ ಸಂಸ್ಥೆಗಳ ಆಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಮಾರ್ಗದರ್ಶನದೊಂದಿಗೆ ಏರ್ಪಡಿಸಿದ ಕನ್ನಡ ಸಪ್ತಾಹ ಕಾರ್ಯಕ್ರಮವನ್ನು ಕನ್ನಡ ಬಾವುಟವನ್ನು ರಂಗದಲ್ಲಿ ಸ್ಥಿರಗೊಳಿಸುವ ಮುಖೇನ ಉದ್ಘಾಟಿಸಿ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರುಗಳಾದ ಕೂಡ್ಲಿ ದೇವದಾಸ ರಾವ್, ಲಂಬೋದರ ಹೆಗಡೆ ನಿಟ್ಟೂರು, ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊೈಕೂರು ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ರಾಘವೇಂದ್ರ ಬಾಳೆಬೆಟ್ಟು ಗೌರವಾನ್ವಿತರಿಗೆ ಶಾಲು ಹೊದಿಸಿ ಗೌರವಿಸಿ ಸ್ವಾಗತಿಸಿದರು. ಪಂಚಮಿ ವೈದ್ಯ ನಾಡಗೀತೆಯನ್ನು ಸ್ತುತಿಸಿ ಪ್ರಾರ್ಥಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಸಿದರು. ಬಳಿಕ ಯಶಸ್ವಿ ಕಲಾವೃಂದದ ಚಿಣ್ಣರಿಂದ ‘ಯುಗಳ ಸಂವಾದ’ ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಂಡಿತು.
Advertisement. Scroll to continue reading.