ಬ್ರಹ್ಮಾವರ : ಭತ್ತದ ಕ್ವಿಂಟಲ್ ಗೆ 2,500 ರೂ.ಬೆಂಬಲ ಬೆಲೆ ನೀಡಲು ಆಗ್ರಹ; ಹಡಿಮಂಚಕ್ಕೆ ತೆನೆ ಬಡಿದು ಪ್ರತಿಭಟನೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಭತ್ತದ ಬೆಳೆಗಾರ ರೈತರು ಭತ್ತಕ್ಕೆ ಕ್ವಿಂಟಲ್ ಗೆ 2500 ರೂ. ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಲ್ಲಿ ಜರುಗಿದ ಹೋರಾಟದ ಸಭೆಗೆ ಬಾರಿ ಬೆಂಬಲ ವ್ಯಕ್ತವಾಗಿದೆ. ಪಕ್ಷಾತೀತವಾಗಿ ನಡೆದ ಈ ಸಭೆಯಲ್ಲಿ ರೈತರು ಮತ್ತು ರೈತ ಮುಖಂಡರುಗಳು ರೈತ ಪರ ಸಂಘಟನೆಗಳು ಭಾಗಿಯಾಗಿ ಸಹಸ್ರಾರು ಮಂದಿ ಭಾಗವಹಿಸಿ ನೈಜ ಸಮಸ್ಯೆಯನ್ನು ಬಿಂಬಿಸಿತ್ತು.
ಈ ಸಂದರ್ಭ ಬಾಳೆಕುದ್ರುಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿಯವರು ಕೂಡಾ ಭಾಗವಹಿಸಿ ಮಾತನಾಡಿ, ದೇಶದ ಬೆನ್ನೆಲುಬು ಎಂದು ಹೇಳಿಕೊಳ್ಳುವ ರೈತನು ಬೆಳೆದ ಬೆಳೆಯ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ರೈತನಿಗೆ ತಾವು ಬೆಳೆದ ಬೆಳೆಗೆ ಸರಕಾರ ಬೆಂಬಲ ಬೆಲೆ ನೀಡುವುದರಲ್ಲಿ ಸರಕಾರಕ್ಕೆ ನಷ್ಟ ಇರುವುದಿಲ್ಲ ಎಂದರು.
ಈ ತನಕ ರೈತರ ಹೆಸರು ಹೇಳಿ ಪ್ರತಿಜ್ಞಾ ವಿಧಿ ಹೇಳಿ ಅಧಿಕಾರ ಪಡೆದು ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಬಂದವರೆ ಹೊರತು ರೈತರ ಹಿತಾಸಕ್ತಿ ಕಾಪಾಡುವ ವ್ಯಕ್ತಿಗಳು ಬಂದಿಲ್ಲ . ಕರಾವಳಿಯ ತುಂಡು ಭೂಮಿಯ ರೈತರಿಗೆ ಪ್ರತ್ಯೇಕವಾದ ರೈತ ನೀತಿ ಬೇಕು. ಇದಕ್ಕೆ ಸರಕಾರ ಸ್ಪಂದಿಸಬೇಕು ಎಂದು ಹೇಳಿ ಇಲ್ಲಿನ ರೈತರ ಎಲ್ಲಾ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಇದೇ ಸಂದರ್ಭ ಅನೇಕರು ಕರಾವಳಿಯ ರೈತರ ಮತ್ತು ಭತ್ತದ ಬೆಳೆಗಾರರ ಸಮಸ್ಯೆಯ ಕುರಿತು ಮಾತನಾಡಿದರು. ಬಳಿಕ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿಯವರಿಗೆ ಸರಕಾರದ ಮತ್ತು ಆಡಳಿತ ಗಮನ ಸೆಳೆಯುವಂತೆ ಮನವಿ ನೀಡಲಾಯಿತು. ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿ 66 ನಡುವೆ ರೈತ ಬೆಳೆದ ತೆನೆ ಬಡಿದು ಹಡಿಮಂಚದಿಂದ ಬಡಿಯಲಾಯಿತು.
ವಸಂತ ಗಿಳಿಯಾರು ಆಲ್ವಿನ್ ಅಂದ್ರಾದೆ , ಬಾರಕೂರು ಶಾಂತಾರಾಮ ಶೆಟ್ಟಿ, ಭುಜಂಗ ಶೆಟ್ಟಿ, ಜ್ಷಾನ ವಸಂತ ಶೆಟ್ಟಿ, ಸತ್ಯನಾರಾಯಣ ಉಡುಪ ಸೇರಿದಂತೆ ಅನೇಕರು ರೈತ ಮುಖಂಡರುಗಳು ಭಾಗವಹಿಸಿದ್ದರು.