ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ರಾಷ್ಟ್ರೀಯ ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡದೆ ಇರುವ ಹಿನ್ನಲೆಯಲ್ಲಿ ಸಿಬ್ಬಂದಿ ವರ್ತನೆಯ ವಿರುದ್ದ ಗುರುವಾರ ಸಾರ್ವಜನಿಕರಿಂದ ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಯು. ಸತ್ಯನಾರಾಯಣ್ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ರಾಷ್ಟ್ರೀಕೃತ ಬ್ಯಾಂಕ್ ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಾರಣದಿಂದಾಗಿ ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶ ಗ್ರಾ.ಪಂ. ಗೆ ಇರುವುದರಿಂದ ಈ ಎಲ್ಲ ಸಮಸ್ಯೆಗಳನ್ನು ಶಾಖಾಧಿಕಾರಿಗಳ ಗಮನಕ್ಕೆ ತಂದು ನಾಗರಿಕರಿಗೆ ಸಿಗಬೇಕಾದ ಗೌರವಗಳನ್ನು ನೀಡುವಲ್ಲಿ ಕ್ರಮವಹಿಸಿ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಮನವಿ ಸಲ್ಲಿಸಲಾಯಿತು.
Advertisement. Scroll to continue reading.
ಮನವಿಗೆ ಸ್ಪಂದಿಸಿದ ಗ್ರಾ.ಪಂ. ಅಧ್ಯಕ್ಷರು ತತ್ಕ್ಷಣವೇ ಗ್ರಾಮಸ್ಥರೊಂದಿಗೆ ಬ್ಯಾಂಕಿಗೆ ತೆರಳಿ ಸಿಬ್ಬಂದಿಯಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಪರಿಹರಿಸುವಂತೆ ಲಿಖಿತವಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ, ಉಪಾಧ್ಯಕ್ಷ ಸುಕುಮಾರ್ ಪೂಜಾರಿ, ಕಾರ್ಯದರ್ಶಿ ಅರುಣ್ ಮೊಗವೀರ, ಸ್ಥಳೀಯರಾದ ಶ್ರೀಕಾಂತ ಹೆಮ್ಮಾಡಿ, ರವಿ ಕೆ. ಹೆಮ್ಮಾಡಿ, ನಾಗರಾಜ್ ಗಾಣಿಗ ಹರೆಗೋಡು, ಹರ್ಷ ಆಚಾರ್, ಶರತ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.