ಕೋಟ : ಮಾರುತಿ ಸ್ವೀಫ್ಟ್ ಕಾರು ಹಾಗೂ ಮೀನು ಸಾಗಾಟದ ಮಿನಿ ಪಿಕಪ್, ಬೈಕ್ ನಡುವೆ ಸರಣಿ ಅಪಘಾತ ನಡೆದು ಮಿನಿ ಪಿಕಪ್ ಚಾಲಕ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಸಾಯ್ಬ್ರಿಕಟ್ಟೆ ಹೈಸ್ಕೂಲ್ ಸಮೀಪ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮಿನಿ ಪಿಕಪ್ ಚಾಲಕ ಮಧುವನ ಅಚ್ಲಾಡಿ ನಿವಾಸಿ ಸುರೇಶ್ ಮರಕಾಲ (40) ಮೃತ ದುರ್ದೈವಿ ಹಾಗೂ ಸಹಸವಾರ ರಾಜು ಮರಕಾಲ (60) ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್ (42) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರೇಶ್ ಹಾಗೂ ರಾಜು ಮರಕಾಲ ಪ್ರತಿದಿನ ಮಲ್ಪೆಯಲ್ಲಿ ಮೀನು ಖರೀದಿಸಿ ಪಿಕಪ್ನಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ಕೂಡ ಮಲ್ಪೆಯಲ್ಲಿ ಮೀನು ಖರೀದಿಸಿ ಸಾಯ್ಬ್ರಿಕಟ್ಟೆಗೆ ಮರಳುವಾಗ ಮಾರುತಿ ಸ್ವಿಫ್ಟ್ ಕಾರು ಅತೀ ವೇಗವಾಗಿ ಬಂದು ಬೈಕು ಹಾಗೂ ಮಿನಿ ಪಿಕಪ್ಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸುರೇಶ್ ಹಾಗೂ ರಾಜು ಮರಕಾಲ ಪಿಕಪ್ ಒಳಗಡೆ ಸಿಲುಕಿ ಹಾಕಿಕೊಂಡಿದ್ದರು. ಅವರನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ನಂತರ ಅಂಬ್ಯಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಮರಕಾಲ ಆಸ್ಪತ್ರೆಗೆ ಕೊಂಡೋಯ್ಯುವ ವೇಳೆಗೆ ಮೃತ ಪಟ್ಟಿದ್ದರು.
Advertisement. Scroll to continue reading.
ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ : ದಿನೇಶ್ ರಾಯಪ್ಪನಮಠ
Advertisement. Scroll to continue reading.