ನವದೆಹಲಿ : ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ಕೃಷಿ ಕಾನೂನುಗಳು ಮತ್ತು ಇತರ ವಿಷಯಗಳ ವಿರುದ್ಧ 15 ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸೆಂಬರ್ 11ರ ಶನಿವಾರ ತಮ್ಮ ಪ್ರತಿಭಟನೆಯನ್ನ ಕೊನೆಗೊಳಿಸಿ ತಮ್ಮ ಮನೆಗಳಿಗೆ ಮರಳುವುದಾಗಿ ರೈತರು ಘೋಷಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಧರಣಿ ನಿರತ ರೈತರು ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದು, ಡಿಸೆಂಬರ್ 11 ರಂದು ದೆಹಲಿಯ ಐದು ಗಡಿಗಳನ್ನು ತೆರವು ಮಾಡಲು ಪ್ರಾರಂಭಿಸುತ್ತೇವೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ನಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ನಾವು ಜನವರಿ 15 ರಂದು ಪರಿಶೀಲನಾ ಸಭೆ ನಡೆಸುತ್ತೇವೆ. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸದಿದ್ದರೆ, ನಾವು ನಮ್ಮ ಆಂದೋಲನವನ್ನು ಪುನರಾರಂಭಿಸಬಹುದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯ ನಂತರ ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುಣಿ ತಿಳಿಸಿದ್ದಾರೆ.
ಕಳೆದ ತಿಂಗಳು ನವೆಂಬರ್ 19 ರಂದು, ಪ್ರಧಾನಿ ನರೇಂದ್ರ ಮೋದಿ ರೈತರನ್ನ ಕ್ಷಮೆಯಾಚಿಸಿ, ಎಲ್ಲಾ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಆದರೆ, ನಂತರವೂ ಪಟ್ಟು ಬಿಡದ ರೈತರು, ಸರ್ಕಾರ ಸಂಸತ್ತಿನಲ್ಲಿ ಕಾನೂನನ್ನು ಹಿಂಪಡೆಯುವವರೆಗೂ ಹಿಂದೆ ಸರಿಯುವುದಿಲ್ಲ ಎಂದಿದ್ದು, ಇದಾದ ಬಳಿಕ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
Advertisement. Scroll to continue reading.
ರೈತರ ಬೇಡಿಕೆಗಳಿಗೆ ಸ್ಪಂದಿಸಿರುವ ಸರ್ಕಾರ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸಮಿತಿಯನ್ನೂ ರಚಿಸಿದೆ. ಹಾಗಾಗಿ ಇಲ್ಲಿಂದ ತೆರಳುತ್ತೇವೆ ಎಂದು ಗುರುವಾರ ರೈತರು ತಿಳಿಸಿದ್ದಾರೆ.