ಕರಾವಳಿ

ಕೋಟ : ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿ ಪ್ರದಾನ

1

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕತೆ ಹೇಳುವುದು ಮತ್ತು ಕತೆ ಕೇಳುವುದು ಮನುಕುಲದ ಅಭ್ಯುದಯದ ದಾರಿ. ಭಾಷೆ ಬೆಳವಣಿಗೆಯಾಗದ ಕಾಲದಲ್ಲೂ ಕಥೆ ಹೇಳುವ ಕ್ರಮ ಬುಡಕಟ್ಟು ಜನಾಂಗದಲ್ಲೂ ಇದ್ದಿತ್ತು. ಭಾಷೆ, ಸಂವಹನ ಕ್ರಮ ಬೆಳೆದಂತೆ ಕಥೆ ಬರೆಯುವ ಕ್ರಮ ಬಂತು ಎಂದು ನಾಡೋಜ ಕೆ. ಪಿ. ರಾವ್ ಹೇಳಿದರು.

ಕೋಟೇಶ್ವರದ ಎನ್. ಆರ್. ಎ. ಎಂ. ಎಚ್. ಪ್ರಕಾಶನದ ಆಶ್ರಯದಲ್ಲಿ ಕೋಟದಲ್ಲಿ ನಡೆದ ಖ್ಯಾತ ಸಾಹಿತಿ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿ ಪ್ರದಾನ ಮತ್ತು ಡಾ. ಎಂ. ಭಾಸ್ಕರ ಆಚಾರ್ಯ ಮತ್ತು ಕೋಟೇಶ್ವರ ಶ್ರೀಧರ ಉಡುಪರ ಕೃತಿಗಳ ಅನಾವರಣ ಸಮಾರಂಭದಲ್ಲಿ ಡಾ. ಭಾಸ್ಕರ ಆಚಾರ್ಯರ ಮೂರು ಕೃತಿಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

Advertisement. Scroll to continue reading.

ಕತೆ ಹೇಳುವುದೂ ಒಂದು ಕಲೆ. ಎಷ್ಟೋ ಬಾರಿ ಕತೆಗಿಂತ ಕತೆಗಾರನೇ ಪ್ರಾಮುಖ್ಯವಾಗುವ ಸಂಭವವಿದೆ. ಆದರೆ ಕತೆ ಬರೆವಾಗ ಬರಹಗಾರನಿಗೆ ತನಗೆ ಗೊತ್ತಿರುವುದನ್ನು ಬರಹದಲ್ಲಿ ಇಳಿಸುವ ತುಡಿತವಿರುತ್ತದೆ. ಡಾ. ಆಚಾರ್ಯರ ಉದ್ಯೋಗದ ಅನುಭವಗಳನ್ನು ಕೃತಿಯಾಗಿಸುವ ತುಡಿತವೇ ಈ ಅಮೂಲ್ಯ ಕೃತಿಗಳು ಎಂದು ಅವರು ವಿಶ್ಲೇಷಿಸಿದರು.

ದ.ರಾ. ಬೇಂದ್ರೆಯವರೊಂದಿಗೆ ಒಡನಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡ ರಾವ್, ಬೇಂದ್ರೆಯವರ ‘ಇನ್ನೂ ಯಾಕೆ ಬರಲಿಲ್ಲಾವ ಹುಬ್ಬಳ್ಳಿಯವ’ ಎಂಬ ಕವನ ಹುಟ್ಟಿದ ಹಿನ್ನೆಲೆಯನ್ನು ವಿವರಿಸಿದರು. ಆಗಿನ ಬ್ರಿಟಿಷ್ ಕಾಲದಲ್ಲಿ ಬೇಂದ್ರೆಯವರಿದ್ದೆಡೆ ಏಕೈಕ ಸಂಪರ್ಕ ಮಾಧ್ಯಮವೆಂದರೆ ಬ್ರಿಟಿಷ್ ಪೆÇೀಸ್ಟ್ ಮ್ಯಾನ್. ಆಗಾಗ ಆತ ಹುಬ್ಬಳ್ಳಿಯಿಂದ ಹೊತ್ತುತರುವ ಕಾಗದ ಪತ್ರ, ಸಮಾಚಾರಗಳ ಬಗ್ಗೆ ಬೇಂದ್ರೆಯವರು ಕಾತರದಿಂದ ನಿರೀಕ್ಷಿಸುತ್ತಿದ್ದರು. ಪೋಸ್ಟ್ ಮ್ಯಾನ್ ಆಗಮನ ವಿಳಂಬವಾದಾಗ, ಆತನ ನಿರೀಕ್ಷೆಯಲ್ಲಿ ಹುಟ್ಟಿದ ಕವನವೇ ಜನಪ್ರಿಯವಾಗಿರುವ ಇನ್ನೂ ಯಾಕೆ ಬರಲಿಲ್ಲಾವ ಹುಬ್ಬಳ್ಳಿಯವ ಹಾಡು.

ಒಂದೊಂದು ಕೃತಿ ಯಾರ್ಯಾರಿಗೆ ಹೇಗೆಲ್ಲಾ ಅರ್ಥವಾಗಿ ಪ್ರೇರಣೆ ನೀಡುತ್ತದೆ ಎಂಬ ಬಗ್ಗೆ ಸ್ವಾರಸ್ಯವಾದ ವಿಚಾರ ತಿಳಿಸಿದ ಕೆ.ಪಿ.ರಾವ್, ಒಮ್ಮೆ ಬೇಂದ್ರೆಯವರು ಒಂದು ಮನೆಗೆ ಹೋಗಿದ್ದಾಗ, ಓರ್ವ ಯುವತಿ ಇನ್ನೂ ಯಾಕೆ.. ಕವನವನ್ನು ಹಾಡುತ್ತಾ ದೇವರಿಗೆ ಆರತಿ ಬೆಳಗುತ್ತಿದ್ದಳು! ಬೇಂದ್ರೆಯವರು ಬೆರಗಾಗಿ ಇದು ದೇವರ ನಾಮ ಅಲ್ಲಮ್ಮ ಎಂದರು. ಅದಕ್ಕೆ ಆಕೆ ಇದನ್ನು ನಾನು ಪೂಜ್ಯ ಸಿದ್ದಾರೂಢ ಸ್ವಾಮಿಯವರಿಗೆ, ಅವರಿನ್ನೂ ಯಾಕೆ ಬಂದಿಲ್ಲ ಎಂದು ಹೇಳುತ್ತಿರುವುದು ಎಂದಾಗ ಬೇಂದ್ರೆಯವರು ದಂಗಾದರು.

ಡಾ. ಭಾಸ್ಕರ ಆಚಾರ್ಯರ ಬೆಟ್ಟದಪುರ, ಹೊಸ ಹಾದಿಯಲ್ಲಿ ಮತ್ತು ದಾರಿ ಕಾಣದಾಗಿದೆ ಎಂಬ ಮೂರು ಕೃತಿಗಳನ್ನು ನಾಡೋಜ ಕೆ. ಪಿ. ರಾವ್ ಲೋಕಾರ್ಪಣೆಗೊಳಿಸಿದರು.

Advertisement. Scroll to continue reading.

ಚಿತ್ರ ನಿರ್ದೇಶಕ, ಯುವ ಸಾಹಿತಿ ಕೋಟೇಶ್ವರ ಶ್ರೀಧರ ಉಡುಪರ ಚೊಚ್ಚಲ ಕೃತಿ “ಫಿಟ್ಟಿಂಗ್ ಪಾರ್ವತಮ್ಮ” ಕಾದಂಬರಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಲೋಕಾರ್ಪಣೆಗೊಳಿಸಿದರು. ಕೃತಿಗೆ ಮುನ್ನುಡಿ ಬರೆದ ಕೆ. ಜಿ. ವೈದ್ಯ ಕೃತಿಯ ಪರಿಚಯ ನೀಡಿದರು.

ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿಯನ್ನು ಖ್ಯಾತ ಲೇಖಕಿ ದವನಾ ಸೊರಬ ಅವರಿಗೆ ಧರ್ಮದರ್ಶಿ ನಿ. ವಿಜಯ ಬಲ್ಲಾಳ್ ಅಂಬಲಪಾಡಿ ಅವರು ಪ್ರದಾನ ಮಾಡಿ ಶುಭಕೋರಿದರು. ದವನಾ ಅವರ ಮಲೆನಾಡಿನ ಅದ್ಭುತ ವಿವರಣೆಗಳನ್ನೊಳಗೊಂಡ “ಪರವಶ” ಕೃತಿಗೆ ಈ ಪ್ರಶಸ್ತಿ ಸಂದಿದೆ. ತೀರ್ಪುಗಾರರ ಪರವಾಗಿ ಬೆಳಗೋಡು ರಮೇಶ್ ಭಟ್ ಮಾತನಾಡಿ, ಆಯ್ಕೆಗಾಗಿ 28 ಕೃತಿಗಳು ಬಂದಿದ್ದವು. ಅವುಗಳಲ್ಲಿ ಅಂತಿಮವಾಗಿ ತೀರ್ಪುಗಾರರ ಮಂಡಳಿ ದವನಾ ಅವರ ಪರವಶ ಕೃತಿಯನ್ನು ಆಯ್ಕೆ ಮಾಡಿತು. ಕುವೆಂಪು ನಂತರ ಮಲೆನಾಡಿನ ಸೌಂದರ್ಯವನ್ನು ಇಷ್ಟು ಸೊಗಸಾಗಿ ಕಟ್ಟಿಕೊಟ್ಟ ಕೃತಿ ಪರವಶ ಎಂದು ಕೃತಿಯ ಪರಿಚಯ ನೀಡಿದರು.
ಈ ಸಂದರ್ಭ ಲೇಖಕಿ ದವನಾ ಅವರನ್ನು ಸನ್ಮಾನಿಸಲಾಯಿತು.

ಚಡಗ ಸಂಸ್ಮರಣ ಗೌರವ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಪ್ರೇಮಾ ಭಟ್ ರವರಿಗೆ ನೀಡಬೇಕಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಸೂರ್ಯನಾರಾಯಣ ಚಡಗರ ಸುಪುತ್ರ ಶೇಷನಾರಾಯಣ ಚಡಗ ಮತ್ತು ನೀಲಾವರ ಸುರೇಂದ್ರ ಅಡಿಗರಿಗೆ ಜಂಟಿಯಾಗಿ ಹಸ್ತಾಂತರಿಸಲಾಯಿತು.

ಪ್ರೇಮಾ ಭಟ್ ರವರ ಲಿಖಿತ ಸಂದೇಶವನ್ನು ಎನ್. ಆರ್. ಎ.ಎಂ. ಎಚ್. ಪ್ರಕಾಶನದ ಡಾ. ಸಬಿತಾ ಆಚಾರ್ಯ ಓದಿದರು. ಶ್ರೀಧರ ಉಡುಪ ಕಗ್ಗಗಳನ್ನು ಹಾಡಿದರು.

ಡಾ. ಭಾಸ್ಕರ ಆಚಾರ್ಯ ಸ್ವಾಗತಿಸಿದರು. ಆರಂಭದಲ್ಲಿ ಶ್ರೀಧರ ಹಂದೆ, ಸುಜಯೀ0ದ್ರ ಹಂದೆ ಮತ್ತು ಕಾವ್ಯಾ ಹಂದೆಯವರಿಂದ ಗಮಕ ವಾಚನ ನಡೆಯಿತು.

Advertisement. Scroll to continue reading.

ಮಿತ್ರ ಮಂಡಳಿ ಕೋಟ ಇವರ ಸಹಕಾರದಲ್ಲಿ ನಡೆದ ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಕೋಟ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರಾಮದೇವ ಐತಾಳ, ಲೇಖಕರ ಹಿತರಕ್ಷಣಾ ವೇದಿಕೆಯ ಸದಸ್ಯರು, ಸಾಹಿತಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಸಾಹಿತಿ ಪ್ರೊ. ಉಪೇಂದ್ರ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com