ವರದಿ : ದಿನೇಶ್ ರಾಯಪ್ಪನಮಠ
ಕೋಟ : ಕೋಟ ವ್ಯಾಪ್ತಿ ಕಲೆ, ಸಾಹಿತ್ಯ, ಧಾರ್ಮಿಕ ಸಂಸ್ಕಾರ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಎಲ್ಲ ಚಟುವಟಿಕೆಗಳು ರಂಗಮಂದಿರವನ್ನು ಬಿಟ್ಟು ಹೊರಗಡೆ ವಿಸ್ತರಿಸದೇ ಇರುವುದು ವಿಷಾದನೀಯ ಎಂದು ಬ್ರಹ್ಮಾವರ ತಾಲ್ಲೂಕಿನ ತಹಶೀಲ್ದಾರ್ ರಾಜಶೇಖರಮೂರ್ತಿ ಹೇಳಿದರು.
ಗುಂಡ್ಮಿ ಸಾಲಿಗ್ರಾಮದ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಶನಿವಾರ ಬೆಂಗಳೂರಿನ ಸಮಸ್ತರು ರಂಗ ಸಂಶೋಧನಾ ಸಂಸ್ಥೆ ವತಿಯಿಂದ ಭಾಸ ಮಹಾಕವಿಯ ಕರ್ಣಭಾರ ಏಕಾಂಕದ ಪ್ರಥಮ ಯಕ್ಷಗಾನ ಪ್ರದರ್ಶನವನ್ನು ಚಂಡೆ ಬಾರಿಸಿ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರ ಪರಿಸರದಲ್ಲಿ ಅಪಾರ ಸಾಹಿತ್ಯ ಭಂಡಾರ ಅಡಗಿದೆ. ಆದರೆ ಕರಾವಳಿಯ ಚಿಂತಕರ ಚಿಂತನೆಗಳು ಕರಾವಳಿಯನ್ನು ದಾಟಿ ಹೊರಗಡೆ ಹೋಗಿಲ್ಲ. ಯಾಕೆ ಎನ್ನುವುದು ಪ್ರಶ್ನೆಯಾಗಿದೆ ಎಂದ ಅವರು, ಅತ್ಯಂತ ಪ್ರತಿಭಾಶಾಲಿ ವ್ಯಕ್ತಿಯಾಗಿದ್ದ ಕರ್ಣನ ಒಳ್ಳೆಯ ಗುಣವೇ ಅವನ ಮೃತ್ಯುವಿಗೆ ಕಾರಣವಾಗಿರುವುದನ್ನು ಹೊಸ ದೃಷಿಕೋನದಲ್ಲಿ ನೋಡಬೇಕು. ಅಲ್ಲದೇ ಹೊಸ ರೂಪ ನೋಡಲು ಓದುಗರ ಓದುವ ಸ್ಥಿತಿಯಲ್ಲಿ ಬದಲಾಗಬೇಕು ಎಂದರು.
Advertisement. Scroll to continue reading.
ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ಮಾತನಾಡಿ ಕಲಾಕೇಂದ್ರಗಳು ಉತ್ತಮ ಸಂಸ್ಕಾರ ನೀಡುತ್ತಿದ್ದು, ಯುವ ಜನಾಂಗ ಹೆಚ್ಚು ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, , ಕೆನರಾ ಬ್ಯಾಂಕಿನ ಅಧಿಕಾರಿ ಕಾರ್ಕಡ ಸೀತಾರಾಮ ಸೋಮಯಾಜಿ,
ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ, ಉಪನ್ಯಾಸಕ ರಾಘವೇಂದ್ರ ತುಂಗ ಉಪಸ್ಥಿತರಿದ್ದರು.
ಹಾಡಿಯಾಟ ಪ್ರಯೋಗ ಪ್ರಸಿದ್ದಿಯ ಗೋಪಾಲಕೃಷ್ಠ ನಾಯರಿ ಅವರು ಕರ್ಣಭಾರವನ್ನು ಬಡಗುತಿಟ್ಟಿನ ಯಕ್ಷಗಾನವನ್ನಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಪ್ರಯೋಗಿಸುತ್ತಿದ್ದು ವಿಶೇಷವಾಗಿತ್ತು. ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪರ ಪ್ರಧಾನ ಸಹಯೋಗದಲ್ಲಿ ರಂಗ ಕಲಾವಿದೆ ಸುಧಾ ಮಣೂರು ಅವರ ಪದವಿನ್ಯಾಸದಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಿತು.
Advertisement. Scroll to continue reading.