ಹೆಬ್ರಿ : ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮ ದಿನಾಚರಣೆ ಪರಾಕ್ರಮ ದಿವಸ್; ನಮ್ಮ ಗ್ರಾಮ ಸ್ವಚ್ಚ ಗ್ರಾಮ – ಜನಜಾಗೃತಿ ಅಭಿಯಾನ
Published
1
ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನಿರಂತರವಾಗಿ ಹೆಬ್ರಿ ಪರಿಸರದ ಸ್ವಚ್ಚತೆಗಾಗಿ ಸಂಘಸಂಸ್ಥೆಗಳು ಶ್ರಮಿಸುತ್ತಿದ್ದರೂ ಅಲ್ಲಲ್ಲಿ ಕಸಗಳನ್ನು ಎಸೆದು ಕಸದ ರಾಶಿಯೇ ಆಗುತ್ತಿದೆ, ಎಲ್ಲರ ಮನಸ್ಸಲ್ಲೂ ನಮ್ಮೂರು ಸ್ವಚ್ಚವಾಗಿರಬೇಕು ಎಂಬ ಕಲ್ಪನೆಗಳು ಬಂದಾಗ ಮಾತ್ರ ನಮ್ಮ ಗ್ರಾಮ ಸ್ವಚ್ಚ ಗ್ರಾಮದ ಕನಸು ನನಸಾಗಲು ಸಾಧ್ಯ, ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಮತ್ತು ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಸ್ವಚ್ಚತೆಗಾಗಿ ವಿಶೇಷವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಹೇಳಿದರು.
ಅವರು ಭಾನುವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮ ದಿನಾಚರಣೆ ಪರಾಕ್ರಮ ದಿವಸ್ ಪ್ರಯುಕ್ತ ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಸಹಕಾರದಲ್ಲಿ ನಡೆಯುತ್ತಿರುವ ಸ್ವಚ್ಚತಾ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದೆ ಹೆಬ್ರಿಯ ಎಲ್ಲಾ ಸಂಸ್ಥೆಗಳು ಸೇರಿ ಅಭಿಯಾನದ ಮೂಲಕ ಸ್ವಚ್ಚ ಹೆಬ್ರಿಗಾಗಿ ವಿಶೇಷ ಯೋಜನೆಯನ್ನು ರೂಪಿಸಲಾಗುತ್ತದೆ ಎಂದು ತಿಳಿಸಿದರು.
Advertisement. Scroll to continue reading.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್. ಐತಾಳ್ ನಾವು ನಿರಂತರವಾಗಿ ನಮ್ಮೂರಿನ ಸ್ವಚ್ಚತೆಗಾಗಿ ಯುವಕರ ತಂಡದೊಂದಿಗೆ ಸೇರಿ ಶ್ರಮಿಸುತ್ತಿದ್ದೇವೆ, ಊರಿನ ಸ್ವಚ್ಚತೆಗಾಗಿ ಅಲ್ಲಲ್ಲಿ ಕಸ ಹಾಕದೆ ಎಲ್ಲರೂ ಸ್ವಚ್ಚತೆಯನ್ನು ಕಾಪಾಡಿ ಎಂದು ಮನವಿ ಮಾಡಿದರು.
ಹೆಬ್ರಿಯ ಎಲ್ಲ ಮುಖ್ಯ ರಸ್ತೆಯಲ್ಲಿ ಜನಜಾಗೃತಿ ಮೂಡಿಸಲು ಆಕರ್ಷಕ ಫಲಕ ಅಳವಡಿಸುವ ಕಾರ್ಯಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಮಚಂದ್ರ ಐತಾಳ್, ಡಾ.ಕಾರ್ತಿಕ್ ಆರ್ ಐತಾಳ್, ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಸದಸ್ಯ ಎಚ್. ರಮೇಶ್ ಆಚಾರ್ಯ, ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್ ಕುಡಿಬೈಲ್, ಯುವ ವೃಂದದ ಸದಸ್ಯರು ಭಾಗವಹಿಸಿದ್ದರು.
ಬಳಿಕ ಹೆಬ್ರಿಯ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.