ವರದಿ : ದಿನೇಶ್ ರಾಯಪ್ಪನಮಠ
ಕೋಟ: ಬಡಗುತಿಟ್ಟಿನ ಯಕ್ಷಕಿಂಕರ ಬಿರುದಾಂಕಿತ ಖ್ಯಾತ ಸ್ತ್ರೀವೇಷಧಾರಿ ಅರಾಟೆ ದಿ. ಮಂಜುನಾಥ ಸ್ಮರಣಾರ್ಥ ಕೊಡ ಮಾಡುವ ಅರಾಟೆ ಮಂಜುನಾಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೇಲ್ತೂರಿನಲ್ಲಿ ಜರಗಿತು.
ಈ ಸಂದರ್ಭ ಬಡಗುತಿಟ್ಟಿನ ಖ್ಯಾತ ಕಲಾವಿದ ಬೇಲ್ತೂರು ರಮೇಶ್ ನಾಯ್ಕ್ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬೇಲ್ತೂರು ರಮೇಶ್ ಅವರು ಸುದೀರ್ಘ 54ವರ್ಷಗಳ ಕಾಲ ವೃತ್ತಿ ಕಲಾವಿದರಾಗಿ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದು ಇವರ ಪುಂಡುವೇಷ ಅತ್ಯಂತ ಅದ್ಬುತವಾದದ್ದು. ಇವರ ನಿರಂತರ ಯಕ್ಷ ಸೇವೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಸಿಗಬೇಕಿತ್ತು ಎಂದರು.
ಪ್ರಶಸ್ತಿ ಸ್ವೀಕರಿಸಿದ ಬೇಲ್ತೂರು ರಮೇಶ್ ಮಾತನಾಡಿ, ನನ್ನ ಯಕ್ಷ ತಿರುಗಾಟದ ಯಶಸ್ವಿಗೆ ಅರಾಟೆ ಮಂಜುನಾಥನವರ ಸಹಕಾರ ಅತ್ಯಂತ ಮಹತ್ವದಿದೆ. ಆದ್ದರಿಂದ ಇಂದು ಅವರ ಹೆಸರಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಅತ್ಯಂತ ಖುಷಿಕೊಡುತ್ತಿದೆ ಎಂದರು.
Advertisement. Scroll to continue reading.
ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ ಶುಭ ಹಾರೈಸಿದರು.
ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ, ಕಟ್ಬೇಲ್ತೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಪುತ್ರನ್, ಮೊಗವೀರ ಯಕ್ಷಕಲಾವೇದಿಕೆಯ ಚಂದ್ರ ಕಂಡ್ಲೂರು, ದೇವದಾಸ್ ಬಾರ್ಕೂರು, ಅರಾಟೆಯವರ ಪತ್ನಿ ಜಲಾಜಾಕ್ಷಿ ಎಂ ಅರಾಟೆ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ, ಅರಾಟೆಯವರ ಪುತ್ರ ಗಣೇಶ್ ಪ್ರಸಾದ್ ಅರಾಟೆ ಸ್ವಾಗತಿಸಿ, ವಿದ್ವಾನ್ ಅಶೋಕ್ ಆಚಾರ್ಯ ಸಾೈಬ್ರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.