ಹುಟ್ಟು ಸಾವುಗಳ ನಡುವಿನ ಪಯಣವೇ ಬದುಕಿನ ಯಾನ. ಮನುಷ್ಯ ಜೀವನದಲ್ಲಿ ಮೂರು ವಿಧ ಮೊದಲನೆಯದು ಬಾಲ್ಯ , ಎರಡನೆಯದು ಯೌವ್ವನ, ಮೂರನೆಯದು ಮುಪ್ಪು. ಒಬ್ಬ ಮನುಷ್ಯ ಹುಟ್ಟಿದ ನಂತರ ಅವನ ಬಾಲ್ಯ ಜೀವನ ಪ್ರಾರಂಭವಾಗುತ್ತದೆ. ಈ ಜೀವನ ನಿಜವಾಗಿಯೂ ಮನುಷ್ಯ ಜೀವನದ ಒಂದು ಅತ್ಯುತ್ತಮ ಕ್ಷಣ. ಈ ಬಾಲ್ಯದ ದಿನಗಳಲ್ಲಿ ತುಂಟತನ,ಮುಗ್ಧತೆ, ನಗುವಿನಿಂದ ಕೂಡಿದ ಮನಸ್ಸಿರುತ್ತದೆ. ನಾವೇನು ನಮ್ಮ ಜೀವನವೇನು ಎಂಬ ಅರಿವು, ಭಾವನೆ ಇರದೆ ಯಾರಿಗೂ ನೋವುಂಟು ಮಾಡದೆ ಎಲ್ಲರಿಗೂ ನಗು ಉಂಟು ಮಾಡುವ ದಿನಗಳವು.
ಹುಟ್ಟಿ ವರುಷ ಕಳೆದು ಬೆಳೆಯುತ್ತಾ ಹೋದಂತೆ ಯೌವನದ ದಿನಗಳು ಆರಂಭವಾಗುತ್ತದೆ. ಈ ದಿನಗಳಲ್ಲಿ ಜೀವನವೇನು ಎಂಬ ಪಾಠದ ಕಲಿಯುವಿಕೆ ಪ್ರಾರಂಭವಾಗುತ್ತದೆ. ಈ ಆರಂಭವೇ ಜೀವನದ ತಿರುವಾಗಿರುತ್ತದೆ. ಈ ಪಯಣದಲ್ಲಿ ನಾವು ಉನ್ನತ ಮಾರ್ಗದಲ್ಲಿ ನಡೆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಆಗಿರುತ್ತದೆ. ಅತಿಯಾಸೆ, ವೈಮನಸ್ಸು, ಕೆಟ್ಟ ಚಟಗಳಿಗೆ ದಾಸ್ಯರಾದಲ್ಲಿ ನಮ್ಮ ಜೀವನದ ಹಾದಿಯು ಕೆಟ್ಟ ಮಾರ್ಗದಲ್ಲಿ ನಡೆದು ಜೀವನ ಕ್ಷಣಿಕವಾಗಿ ಬಿಡುತ್ತದೆ.
Advertisement. Scroll to continue reading.
ಯೌವನದ ಜೀವನವನ್ನು ಹೇಗೆ ಕಳೆಯುತ್ತೇವೆ ಎಂಬುವುದರ ಮೇಲೆ ನಮಗೆ ನಾವೇನು, ನಮ್ಮವರೇನು, ನಮ್ಮ ಜೀವನವೇನು ಎಂಬ ಬಗ್ಗೆ ಅರಿವು ಮೂಡುತ್ತದೆ. ಜೀವನದ ಎರಡು ವಿಧಗಳಲ್ಲಿ ನಾವು ಹೇಗೆ ಬದುಕಿದ್ದೇವೆ ಎಂಬ ಲೆಕ್ಕಾಚಾರ ತಿಳಿಯುವುದು ಮುಪ್ಪಿನ ಕಾಲದಲ್ಲಿ. ಮುಪ್ಪಿನ ಕಾಲದಲ್ಲಿ ನಾವು ಖುಷಿ ಸಂತೋಷ ನೆಮ್ಮದಿಯಿಂದ ಬದುಕಿದ್ದರೆ ಅದರರ್ಥ ನಾವು ನಮ್ಮ ಯೌವನದಲ್ಲಿ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸಿಕೊಂಡು ಬಂದಿದ್ದೇವೆ ಎಂದು. ಮನುಷ್ಯನಾಗಿ ಹುಟ್ಟಿದ ಮೇಲೆ ಬಾಲ್ಯ ಯೌವನ ಮುಪ್ಪಿನ ಕಾಲ ಎಲ್ಲರಿಗೂ ಬಂದೇ ಬರುತ್ತದೆ. ಈ ಕಾಲಗಳಲ್ಲಿ ನಾವು ಹೇಗೆ ಬದುಕಿದ್ದೇವೆ ಅನ್ನುವುದೇ ನಮ್ಮ ಬದುಕಿನ ಯಾನ.
ನಿಶ್ಮಿತ ಪೂಜಾರಿ, ಉಡುಪಿ