ಕರಾವಳಿ

1 ಕಿ.ಮೀ. ದೂರ ಕ್ರಮಿಸಲು 35 ಕಿ.ಮೀ. ಸಂಚರಿಸಬೇಕು; ಸೇತುವೆಯ ನಿರೀಕ್ಷೆಯಲ್ಲಿ ಜನರು : ಇದು ಕೋಡಿ ಬೆಂಗ್ರೆ ಊರಿನ ಜನರ ಸಂಚಾರದ ಬವಣೆಯ ಕಥೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಉಡುಪಿ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಡಲು ಮತ್ತು ನದಿಗಳ ನಡುವೆ ಇರುವ ಸಾಸ್ತಾನ ಕೋಡಿ ಮತ್ತು ಕೋಡಿ ಬೆಂಗ್ರೆ ಎನ್ನುವ ಊರಿನ ಜನರ ಬದುಕಿನ ಮತ್ತು ಸಂಚಾರದ ಬವಣೆಯ ಕಥೆಯಿದು.

ಹೌದು, ಇದು ಇದು 3 ಜೀವ ನದಿಗಳಾದ ಸೀತಾ , ಸ್ವರ್ಣ ಮತ್ತು ಮಡಿಸಾಲು ಹೊಳೆಯು ಸಮುದ್ರಕ್ಕೆ ಸೇರುವ ಹಂಗಾರಕಟ್ಟೆ ಬಂದರು ಪ್ರದೇಶದಿಂದ ಬೆಂಗ್ರೆ ನಡುವೆ ಇರುವ ಅಂತರ ಕೇವಲ 1 ಕಿಮೀ.

Advertisement. Scroll to continue reading.

ಇದು ಸಾಸ್ತಾನ ಬಳಿಯ ಕೋಡಿ ಗ್ರಾಮ ಪಂಚಾಯತಿಗೆ ಬರುವ ಊರು.

ಆದರೆ, ಬೆಂಗ್ರೆಯ ಜನರು ಅತೀ ಅಗತ್ಯವೆನಿಸಿದ ಗ್ರಾಮ ಪಂಚಾಯತಿಗೆ ಬರಲು ಹಂಗಾರಕಟ್ಟೆ ಮೂಲಕ ಬರಬೇಕು. ಸಂಚಾರಕ್ಕೆ ಅಳಿವೆ ದಾಟಲು ಇರುವುದು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಒಂದು ಹಳೆ ಬಾರ್ಜ್. ಕಾರು ಅಥವಾ ವಾಹನದಲ್ಲಿ ಬರಬೇಕಾದರೆ ಕೋಡಿ ಬೆಂಗ್ರೆಯ ಜನರು ಕಲ್ಯಾಣಪುರ ಸಂತೆಕಟ್ಟೆ ಬ್ರಹ್ಮಾವರ ಸಾಸ್ತಾನ ಮೂಲಕ 37 ಕಿ.ಮೀ. ಸುತ್ತು ಬಳಸಿ ಗ್ರಾಮ ಪಂಚಾಯತಿಗೆ ಬರಬೇಕು.

ಇಲ್ಲಿನ ಜನರ ಮುಖ್ಯ ಕಸುಬು ಮೀನುಗಾರಿಕೆ. ಅದನ್ನು ಹಂಗಾರಕಟ್ಟೆ ಮಲ್ಪೆ ಅಥವಾ ಗಂಗೊಳ್ಳಿ ಬಂದರಿಗೆ ಕೊಂಡು ಹೋಗಬೇಕು. ಮಹಿಳೆಯರು ಮೀನು ಮಾರಾಟ ಮಾಡಲು ಸಾಸ್ತಾನ ಅಥವಾ ಬ್ರಹ್ಮಾವರಕ್ಕೆ ಬರಲು ಇದೇ ಬಾರ್ಜ್ ನಲ್ಲಿ ಬರಬೇಕು. ಈಗ ಸಂಚಾರ ಮಾಡುವ ಬಾರ್ಜ್ ಕೂಡಾ ತೀರಾ ದುಸ್ಥಿಯಲ್ಲಿದ್ದು ಸಂಚರಿಸಲು ಭಯ ಪಡುತ್ತಾರೆ. ಇಲ್ಲಿನ ಜನರು ಬಾರ್ಜ್ ನಲ್ಲಿ 10 ಮೋಟಾರು ಬೈಕ್ ಮತ್ತು 25 ಮಂದಿ ಜನರು ಒಂದು ಬಾರಿಗೆ ಸಂಚರಿಸಬಹುದು. ಅದು ಕೂಡಾ ಬೆಳಿಗ್ಗೆ 7 -30 ರಿಂದ ಸಂಜೆ 6 -30 ರ ವರೆಗೆ ಮಾತ್ರ.

ಕೋಡಿ ಗ್ರಾಮ ಪಂಚಾಯತಿಗೆ ಕೋಡಿ ಬೆಂಗ್ರೆಯಲ್ಲಿ 290 ಮನೆಗಳಿದ್ದು, 1200 ಮತದಾರರು, 2 ಮಹಿಳೆಯರು ಮತ್ತು 2 ಪುರುಷರು ಒಟ್ಟು 4 ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ.
ಬೆಂಗ್ರೆಯಲ್ಲಿರುವ ಮನೆಗಳಿಗೆ ಭೂಮಿ ಪರಿವರ್ತನೆ ಯಾಗುವಂತಿಲ್ಲ. ಯಾಕೆಂದರೆ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ನದಿಗಳ ಸಂಗಮ. ಸಿ ಆರ್ ಝಡ್ ಮತ್ತು ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿದೆ.
ಕೋಟ ಮತ್ತು ಬ್ರಹ್ಮಾವರ ಪೋಲೀಸ್ ಠಾಣೆ ಹತ್ತಿರವಾದರೂ ಇವರಿಗೆ ದೂರದ ಮಲ್ಪೆಗೆ ಸೇರುತ್ತದೆ.

ಇಲ್ಲಿನ ಭೂ ಪ್ರದೇಶದಲ್ಲಿ ಕೆಲವು ವರ್ಷದ ಹಿಂದೆ ದೊಡ್ಡ ಬಾರ್ಜ್ ಇದ್ದು, ಅದರಲ್ಲಿ ಲಾರಿ ಕಾರುಗಳು ಸೇರಿದಂತೆ ನೂರಾರು ಜನರು ಅಳಿವೆ ದಾಟುತ್ತಿದ್ದರು.
ಅದರಲ್ಲಿ ಆದಾಯ ಇಲ್ಲ ಎನ್ನುವ ಕಾರಣ ಹೇಳಿ ಅದನ್ನು ಬೇರೆ ಕಡೆಗೆ ಕಳುಹಿಸಲಾಯಿತು.


ಒಂದು ಸೇತುವೆ ಅಥವಾ ದೊಡ್ಡ ಬಾರ್ಜ್ ಮತ್ತು ಕೋಡಿ ಬೆಂಗ್ರೆಯನ್ನು ಅಲ್ಲಿ ಸಮೀಪ ಇರುವ ಕೆಮ್ಮಣ್ಣು ಗ್ರಾಮ ಪಂಚಾಯತಿಗೆ ಸೇರ್ಪಡೆಗೊಳಿಸಬೇಕು ಎನ್ನುವುದು ಇಲ್ಲಿನ ಜನರ ಹಲವಾರು ವರ್ಷದ ಬೇಡಿಕೆ.
ಬಾರ್ಜ್ ಗಳು ಉಪ್ಪು ನೀರಿನಲ್ಲಿ ಸಂಚರಿಸುವಾಗ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎನ್ನುವುದು ಉಪ್ಪು ನೀರಿನ ಗುಣವನ್ನು ಕಂಡ ಇಲ್ಲಿನ ಜನರ ಅಭಿಪ್ರಾಯವಾಗಿದೆ.
ಹಂಗಾರಕಟ್ಟೆಯಿಂದ ಕೋಡಿ ಬೆಂಗ್ರೆಗೆ ಸೇತುವೆ ರಚನೆಯಾದಲ್ಲಿ ಈಗಾಗಲೇ ಪ್ರವಾಸಿಗರನ್ನು ಸೆಳೆಯುತ್ತಿರುವ ಇಲ್ಲಿನ ಡೆಲ್ಟಾ ಬೀಚ್ ನಿಂದ ಮಲ್ಪೆ ತನಕ ರಸ್ತೆ ಸಂಚಾರ ಇರುವುದರಿಂದ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣವಾಗಬಹುದು.
ಕಾಡು ಬೆಟ್ಟ ಪ್ರದೇಶದಲ್ಲಿ ಸುರಂಗ ಕೊರೆದು ಅದೆಷ್ಟೋ ರಸ್ತೆಗಳು ಸೇತುವೆಗಳು ಡ್ಯಾಂ ಗಳು ರಚನೆಗೊಂಡು ಸಂಪರ್ಕ ವ್ಯವಸ್ಥೆಯಲ್ಲಿ ಮುಂದುವರಿದ ಉಡುಪಿ ಜಿಲ್ಲೆಯ, ಕೋಡಿ ಬೆಂಗ್ರೆಯಂತಹ ಸಂಪರ್ಕ ವಂಚಿತ ಜನರ ಬೇಡಿಕೆಯನ್ನು ಅತೀ ಶೀಘ್ರದಲ್ಲಿ ಮಾಡಬೇಕಾಗಿದೆ.

ಪ್ರಭಾಕರ್ಪ್ರಭಾಕರ ಮೆಂಡನ್, ಅಧ್ಯಕ್ಷ, ಕೋಡಿ ಗ್ರಾ.ಪಂ.

ಪಂಚಾಯತಿ ತಲುಪಲು ಇಲ್ಲಿಂದ 35 ಕಿ.ಮೀ ವರೆಗೆ ಸಂಚಾರ ಮಾಡಬೇಕಾಗಿದೆ. ಸಣ್ಣ ಬಾರ್ಜ್ ಇದ್ದು ಅದು ಅಷ್ಟೊಂದು ಅನುಕೂಲಕರವಾಗಿಲ್ಲ. ದೊಡ್ಡ ಬಾರ್ಜ್ ಬೇಕಾಗಿದೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಿಸಿದಲ್ಲಿ ಅನುಕೂಲವಾಗಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತಮವಾಗಲಿದೆ. ಕೆಮ್ಮಣ್ಣು ಗ್ರಾ.ಪಂಗೆ ಕೋಡಿ ಬೆಂಗ್ರೆಯನ್ನು ಸೇರಿಸುವ ಕೆಲಸ ಪ್ರಗತಿಯಲ್ಲಿದೆ.ಪ್ರಭಾಕರ ಮೆಂಡನ್, ಅಧ್ಯಕ್ಷ, ಕೋಡಿ ಗ್ರಾ.ಪಂ.


ನಾಗರಾಜ ಕುಂದರ್ ಬೆಂಗ್ರೆ, ಸದಸ್ಯ, ಕೋಡಿ ಬೆಂಗ್ರೆ ಗ್ರಾ.ಪಂ

ಕೋಡಿ ಬೆಂಗ್ರೆಯನ್ನು ಕೆಮ್ಮಣ್ಣು ಪಂಚಾಯತ್ ಗೆ ಸೇರಿಸುವ ಪ್ರಯತ್ನ ಕಳೆದ ಮೂವತ್ತು ವರ್ಷಗಳಿಂದ ನಡೆಯುತ್ತಿದೆ. ಆದಷ್ಟು ಬೇಗ ಈ ಕೆಲಸ ಬೇಕು. ಅಲ್ಲದೇ, ಇಲ್ಲಿ ಸೇತುವೆ ಅತೀ ಅಗತ್ಯವಾಗಿ ಬೇಕಿದೆ. ಇದರಿಂದ ಮೀನುಗಾರರಿಗೂ ಅನುಕೂಲವಾಗಲಿದೆ. ನಾಗರಾಜ ಕುಂದರ್ ಬೆಂಗ್ರೆ, ಸದಸ್ಯ, ಕೋಡಿ ಬೆಂಗ್ರೆ ಗ್ರಾ.ಪಂ

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com