ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕೆರೆ ಇಲ್ಲಿನ ಐ.ಕ್ಯೂ.ಎ.ಸಿ ಮತ್ತು ದೈಹಿಕ ಶಿಕ್ಷಣ ವಿಭಾಗದಿಂದ ಎಲ್ಲಾ ಪ್ರಥಮ ಪದವಿ ವಿದ್ಯಾರ್ಥಿಗಳಿಗಾಗಿ ‘ಆರೋಗ್ಯಪೂರ್ಣ ಜೀವನದಲ್ಲಿ ಯೋಗದ ಮಹತ್ವ’ ಕುರಿತಾಗಿ ವಿಶೇಷ ಉಪನ್ಯಾಸ ಹಾಗೂ ಯೋಗಾಸನಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತಿಚಿಗೆ ಕಾಲೇಜಿನಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀಕುಮಾರ್ ಯೋಗದ ಮಹತ್ವದ ಕುರಿತಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿ, ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದರೂ ಆಧುನಿಕತೆ ಪ್ರಭಾವಕ್ಕೊಳಗಾಗಿ ಮಹತ್ವ ಕಳೆದುಕೊಂಡರೂ ಪ್ರಸಕ್ತ ಮತ್ತೆ ಇಡೀ ವಿಶ್ವದಲ್ಲೇ ಜನಪ್ರಿಯವಾಗುತ್ತಿದೆ. ಆಧುನಿಕ ಜೀವನ ಕ್ರಮದಿಂದ ಎದುರಾದ ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಒತ್ತಡಗಳು ಮತ್ತೆ ಜನರನ್ನು ಯೋಗದತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಯವಜನತೆ ಚಿಕ್ಕಪ್ರಾಯದಲ್ಲಿ ಯೋಗಾಸನಗಳನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯಪೂರ್ಣವಾಗಿ ಬದುಕಿ ಕುಟುಂಬಕ್ಕೂ, ಸಮಾಜಕ್ಕೂ ಆಸರೆಯಾಗಬಲ್ಲರು ಎಂದರು.
Advertisement. Scroll to continue reading.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ.ವಿ.ಗಾಂವ್ಕರ ಇಂದು ಯೋಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮದಲ್ಲೂ ಸೇರಿಸಲ್ಪಟ್ಟು ವಿದ್ಯಾರ್ಥಿಗಳಿಗೆ ಯೋಗ ಕಲಿಕೆ ಇಂದು ಅನಿವಾರ್ಯವಾಗಿದೆ ಎಂದರು.
ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ.ಎಮ್ ಯೋಗದ ಔಚಿತ್ಯವನ್ನು ಪ್ರಾಸ್ತವಿಕ ಮಾತುಗಳಲ್ಲಿ ತಿಳಿಸಿದರೆ, ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಮನೋಜ್ಕುಮಾರ್.ಎಂ ಸ್ವಾಗತಿಸಿದರು, ರಾಜಕೀಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು ನಂತರದಲ್ಲಿ ನಡೆದ ಯೋಗ ಪ್ರಾತ್ಯಕ್ಷಿಕೆ-ತರಬೇತಿಯಲ್ಲಿ ಪ್ರಥಮ ಪದವಿಯ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ವೃಂದದವರು ಪಾಲ್ಗೊಂಡರು.