ಶಿರ್ವ: ಅಕ್ರಮ ಕಟ್ಟಡ ತೆರವು; ಸೊರಕೆ ನೇತೃತ್ವದಲ್ಲಿ ಪ್ರತಿಭಟನೆ
Published
0
ಕಾಪು: ಸರ್ಕಾರಿ ಜಮೀನಿನಲ್ಲಿ ವೃದ್ಧೆಯೊಬ್ಬರು ನಿರ್ಮಿಸಿದ ಅನಧಿಕೃತ ಗುಡಿಸಲು ಮನೆಯನ್ನು ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕೆಡವಿ ಹಾಕಿದ ಘಟನೆ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ದಲಿತ ಜನಾಂಗಕ್ಕೆ ಸೇರಿದ ಪದ್ಮಬಾಯಿ ಎಂಬವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಗಡಿನ ಗುಡಿಸಲು ಮನೆ ನಿರ್ಮಾಣ ಮಾಡಿಕೊಂಡಿದ್ದರು.ಇದನ್ನು ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಮುಖಾಂತರ ಮನೆಯೊಳಗಿದ್ದ ದಿನಸಿ ಬಟ್ಟೆ ಸಾಮಾಗ್ರಿಗಳ ಸಹಿತವಾಗಿ ಮನೆಯನ್ನು ಕೆಡವಿ ಹಾಕಿದ್ದಾರೆ.ನೋಟೀಸ್ ನೀಡಿದ ಎರಡೇ ದಿನದಲ್ಲಿ ಮನೆಯನ್ನು ಕೆಡವಿ ಹಾಕಲಾಗಿದೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಈ ವಿಚಾರವನ್ನು ಖಂಡಿಸಿ ಮಂಗಳವಾರ ಶಿರ್ವ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಾಜಿ ಸಚಿವ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬ ದೃಷ್ಟಿಯಿಂದ ಪ್ರತಿಭಟನೆ ನಡೆಸಿ ಪಿಡಿಓ ಮುಖಾಂತರ ಮನವಿ ಸಲ್ಲಿಸುವ ಸಮಯದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೊರಕೆಯ ನಡುವೆ ಮಾತಿನ ಚಕಮಕಿ, ತಲ್ಲಾಟ ನಡೆಯಿತು. ಈ ಸಂದರ್ಭ ಮಾಜಿ ಸಚಿವ ಸೊರಕೆಯವರ ಶರ್ಟ್ ಹರಿದ ಘಟನೆಯೂ ನಡೆದಿದೆ.
Advertisement. Scroll to continue reading.
ಕಾಂಗ್ರೆಸಿಗರ ಪ್ರತಿಭಟನೆ ಸುದ್ದಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಸೊರಕೆಯ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದು ಮಾತ್ರವಲ್ಲದೆ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಘೋಷಣೆ ಕೂಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.
ಘಟನಾ ಸ್ಥಳಕ್ಕೆ ಕಾಪು ತಾಲೂಕಿನ ತಹಾಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ವಿನಯ್ ಕುಮಾರ್ ಸೊರಕೆಯ ಮನವೊಲಿಸಲು ಪ್ರಯತ್ನಿಸಿ ಮನೆ ಕಳೆದುಕೊಂಡ ಕುಟುಂಬಕ್ಕೆ ಶೀಘ್ರವಾಗಿ ನ್ಯಾಯ ಒದಗಿಸುವ ಬಗ್ಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.