ಗುಜರಾತ್ ನಲ್ಲಿನ 108 ಅಡಿ ಎತ್ತರದ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
Published
3
ಗುಜರಾತ್: ಇಂದು ದೇಶದೆಲ್ಲೆಡೆ ಹನುಮ ಜಯಂತಿ ಸಂಭ್ರಮ. ಈ ಸುದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108 ಅಡಿ ಹನುಮಾನ್ ಪ್ರತಿಮೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಿದರು.
ಹಾಗೇ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಹನುಮಾನ್ ಜಯಂತಿ ಶುಭಾಶಯ ಕೋರಿದ್ದಾರೆ. ಆಂಜನೇಯನ ಜಯಂತಿಯಾದ ಇಂದು ದೇಶದ ಎಲ್ಲರಿಗೂ ಶುಭಾಶಯಗಳು. ಆಂಜನೇಯನೆಂದರೆ ಶಕ್ತಿ, ಧೈರ್ಯ, ಸಂಯಮದ ಪ್ರತೀಕ. ಆ ಪವನಪುತ್ರನ ಕೃಪೆಯಿಂದ ಪ್ರತಿಯೊಬ್ಬರೂ ಶಕ್ತಿ, ಧೈರ್ಯ, ಅರಿವು, ಸದ್ಬುದ್ದಿ ಪಡೆಯುವಂತಾಗಲಿ ಎಂದು ಹೇಳಿದ್ದಾರೆ.
ಹನುಮಂಜಿ ಚಾರ್ ಧಾಮ್’ ಯೋಜನೆಯ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಪ್ರತಿಮೆಗಳಲ್ಲಿ ಈ ಪ್ರತಿಮೆ ಎರಡನೆಯದು ಎಂದು ಪ್ರಧಾನಿ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸರಣಿಯ ಮೊದಲ ಪ್ರತಿಮೆಯನ್ನು ಉತ್ತರದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2010 ರಲ್ಲಿ ಸ್ಥಾಪಿಸಲಾಯಿತು. ಆದರೆ, ಮೂರನೇ ಪ್ರತಿಮೆಯ ಕೆಲಸವನ್ನು ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರಾರಂಭಿಸಲಾಗಿದೆ ಎಂದು ಪಿಎಂಒ ಮಾಹಿತಿ ನೀಡಿದೆ.