ಬಾರಕೂರು : ರಸ್ತೆ ಅಗಲೀಕರಣವಾದರೂ ಕಿರು ಸೇತುವೆಗೆ ಸಿಕ್ಕಿಲ್ಲ ದುರಸ್ಥಿ ಭಾಗ್ಯ; ಕುಸಿತದ ಭೀತಿಯಲ್ಲಿದೆ ಹನೆಹಳ್ಳಿ ಕಿರು ಸೇತುವೆ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಕೂರಾಡಿ ಮೂಲಕ ಕೊಕ್ಕರ್ಣೆಯ ಅತೀ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣವಾದರೂ ಇದರ ನಡುವೆ ಸಿಗುವ ಸಂಕಮ್ಮ ತಾಯಿ ತೋಡಿಗೆ ಮಾಡಲಾದ ಕಿರು ಸೇತುವೆಯೊಂದು ಕುಸಿಯು ಭೀತಿ ಕುರಿತು ದಿಕ್ಸೂಚಿ ನ್ಯೂಸ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ವಿಸ್ತೃತ ವರದಿ ಮಾಡಿ ಗಮನ ಸೆಳೆದಿತ್ತು.
ವರದಿಯ ಗಂಭೀರತೆಯನ್ನು ಮನಗಂಡು ಕಳೆದ ವರ್ಷ ಮೇ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳುವಾಗ ಬೇಗನೆ ಮಳೆ ಬಂದು ನೀರು ಹರಿಯಲು ಆರಂಭವಾದ ಹಿನ್ನೆಲೆಯಲ್ಲಿ ಕಾಮಗಾರಿ ನಿಲುಗಡೆಗೊಂಡು ಈ ವರ್ಷ ಮಾಡುವ ಭರವಸೆ ನೀಡಲಾಗಿತ್ತು.
Advertisement. Scroll to continue reading.
ಹನೆಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೈಲುಮನೆಯಲ್ಲಿದೆ ಈ ಕಿರು ಸೇತುವೆ. ಪ್ರತೀದಿನ ಬಾರಕೂರು ಕಾಲೇಜಿಗೆ ಹೋಗುವ ಬಸ್ ಗಳು ಕಛೇರಿಗಳಿಗೆ ಹೋಗುವ ಜನರು , ಕೃಷಿ ಸಲಕರಣೆಗಳ , ಉತ್ಪನ್ನಗಳ ಸಾಗಾಟ ಮತ್ತು ಅಧಿಕ ಭಾರದ ಹಲವಾರು ವಾಹನಗಳ ಓಡಾಟ ಇದೇ ರಸ್ತೆಯಲ್ಲಿ ಸಾಗಬೇಕು.
60 ವರ್ಷದ ಹಿಂದೆ ಎತ್ತಿನ ಬಂಡಿ ಓಡಾಟದ ಸಮಯದಲ್ಲಿ ಮಾಡಲಾದ ಕಿರು ಸೇತುವೆ ತಳ ಭಾಗ ಪೂರ್ತಿಯಾಗಿ ಕುಸಿತಗೊಂಡಿದೆ. ಬದಿಯಲ್ಲಿ ಹಾಕಲಾದ ತಡೆ ಬೇಲಿ ತುಂಡಾಗಿ ಹಲವು ವರ್ಷ ಕಳೆದಿದೆ. ಉತ್ತಮ ರಸ್ತೆ ಕಾಮಗಾರಿ ಆದರೂ ಕೂಡಾ ಕಿರು ಸೇತುವೆ ಕುಸಿತಗೊಂಡರೆ ಸಂಪರ್ಕ ಕಡಿತಗೊಂಡು ಹನೆಹಳ್ಳಿ, ಬಂಡೀಮಠ, ಕೂರಾಡಿ ಭಾಗದ ಜನರಿಗೆ ರಂಗನಕೆರೆ ಮೂಲಕ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ.
ಪ್ರತಿ ದಿನ ಸಂಚರಿಸುವ ಹಲವಾರು ವಾಹನಗಳು ಕಿರು ಸೇತುವೆ ಬಳಿ ಬಿದ್ದು ಎದ್ದವರು, ಗಾಯಗೊಂಡವರು ಲೆಕ್ಕವಿಲ್ಲದಷ್ಟಾಗಿದ್ದಾಗಿದ್ದಾರೆ.
ರಸ್ತೆಯ ಅಗಲೀಕರಣದ ಗುತ್ತಿಗೆಯಲ್ಲಿ ಕಿರು ಸೇತುವೆ ಕುರಿತ ಯೋಜನೆ ಇಲ್ಲದ ಕುರಿತು ಈ ಅವಾಂತರಕ್ಕೆ ಕಾರಣವಾಗಿದೆ. ಆದರೂ ರಸ್ತೆಯ ಗುತ್ತಿಗೆ ದಾರರು ಕಿರು ಸೇತುವೆಯನ್ನು ಮಾಡಿ ಅನುದಾನ ಮತ್ತೆ ಪಡೆಯುವ ಉದ್ದೇಶ ಇತ್ತು. ಇದೀಗ ಸರಕಾರದ ಕಾಮಗಾರಿಗಳಿಗೆ 40 ಶೇಕಡಾ ಕಮಿಷನ್ ಮತ್ತು ಗುತ್ತಿಗೆ ದಾರರೊಬ್ಬರು ಉಡುಪಿಯಲ್ಲಿ ಆತ್ಮ ಹತ್ಯೆ ಮಾಡಿಕೊಂಡ ವಿದ್ಯಮಾನದಿಂದ ರಾಜ್ಯ ಮಟ್ಟದಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಅತೀ ಅಗತ್ಯದ ಕಾಮಗಾರಿಗಳಿಗೆ ಬ್ರೇಕ್ ಬಿದ್ದ ಕಾರಣ ಈ ಕಿರು ಸೇತುವೆ ಕಾಮಗಾರಿ ಕೂಡಾ ನೆನೆಗುದಿಗೆ ಬೀಳುತ್ತದೋ ಎನ್ನುವ ಶಂಕೆ ಸಾರ್ವಜನಿಕರಿಗೆ ಉಂಟಾಗಿದೆ .
ಈಗಾಗಲೆ ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಈ ವರ್ಷ ಕೂಡಾ ಕಿರು ಸೇತುವೆ ಆಗದಿದ್ದಲ್ಲಿ ಸಾರ್ವಜನಿಕರು ಸಂಘಟಿತರಾಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಮಾಡುವ ಸಿದ್ದತೆಯಲ್ಲಿದ್ದಾರೆ ಇಲ್ಲಿನ ಜನರು.
Advertisement. Scroll to continue reading.
ಉತ್ತಮ ರಸ್ತೆ ಮಾಡಿಯೂ ಕಿರು ಸೇತುವೆ ದುಸ್ಥಿತಿಯಲ್ಲಿರುವುದರಿಂದ ಅತಂಕದಲ್ಲಿ ಸಂಚಾರ ಮಾಡುವಂತೆ ಆಗಿದೆ ಶಾಸಕರು ಶಿಫಾರಸು ಮಾಡಿ ಯಾವುದಾದರೂ ಅನುದಾನದಿಂದ ಕೂಡಲೆ ಕಿರು ಸೇತುವೆ ಮಾಡಿದಲ್ಲಿ ಜನರಿಗೆ ಉಪಯುಕ್ತವಾಗುತ್ತದೆ.ವೇದಮೂರ್ತಿ ರಮೇಶ್ ಭಟ್, ನಾಯರ್ ಬೆಟ್ಟು
ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಮಾಡುವಂತೆ ಹೇಳಿದ್ದೇವೆ. ಮಾಡುತ್ತೇವೆ ಅಂದಿದ್ದಾರೆ. ಈ ನಡುವೆ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣದ ಬಳಿಕ ಕಾಮಗಾರಿ ಸರಕಾರದ ಅನುಮೋದನೆಗೆ ಅಂಕಿತ ಬೀಳದೆ ಕಾಮಗಾರಿ ಮಾಡದಂತೆ ಇರುವ ತೊಡಕು ಕೂಡಾ ಇದೆ. ಮಳೆಗಾಲದ ಮೊದಲು ಕಾಮಗಾರಿ ಮಾಡುತ್ತಾರೆ.ಜಗದೀಶ್ ಭಟ್, ಸಹಾಯಕ ಕಾರ್ಯಪಾಲಕ ಅಭಯಂತರರು, ಉಡುಪಿ ಜಿಲ್ಲೆ