ಕರಾವಳಿ

ಬ್ರಹ್ಮಾವರ : ಅಭಿವೃದ್ಧಿಯ ಹೆಸರಿಲ್ಲದೆ ಕೊರಗುತ್ತಿದೆ ಗ್ರಾಮ; ಸೇತುವೆ, ಸಂಪರ್ಕ ರಸ್ತೆಗಾಗಿ ನಾಗರಮಠ ಗ್ರಾಮಸ್ಥರ ಆಗ್ರಹ

3

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರ 3 ಕ್ಷೇತ್ರಗಳಿಗೆ ವಿಲೀನಗೊಂಡ ನಂತರ ಇನ್ನೂ ಕೂಡಾ ಮೂಲಭೂತ ಸಮಸ್ಯೆಗಳು ಇಲ್ಲಿ ಅನಾಥವಾಗಿ ಉಳಿದುಕೊಂಡಿದೆ. ಅದಕ್ಕೆ ಉದಾಹರಣೆಯಾಗಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬಾರಕೂರು ಗ್ರಾಮಪಂಚಾಯತಿ ವ್ಯಾಪ್ತಿಯ ಹೊಸಾಳ 1 ನೇ ವಾರ್ಡ್ ನ ನಾಗರಮಠದ ಜನರು ಗ್ರಾಮಪಂಚಾಯತಿಗೆ ಬರಲು 10 ಕಿ.ಮಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಇನ್ನೂ ಇದೆ.


ಬಾರಕೂರು ಗ್ರಾಮ ಪಂಚಾಯತಿ, ಬ್ಯಾಂಕ್, ಆಸ್ಪತ್ರೆ ಮತ್ತು ಪಡಿತರಕ್ಕೆ ಇಲ್ಲಿನ ಜನರು ಕಾರ್ಕಡ ಮತ್ತು ಕಾವಡಿ , ಹೇರಾಡಿ, ಚೌಳಿಕೇರಿ ಮೂಲಕ ಬಾರಕೂರು ತಲುಪಬೇಕು. ಸೀತಾನದಿಯ ಕವಲು ನದಿಯು ಇಲ್ಲಿನ ಜನರ ನಡುವೆ ಸಂಬಂಧವನ್ನು ಕಡಿತಗೊಳಿಸಿದೆ.

Advertisement. Scroll to continue reading.


ಬಸವರಾಜ್ ಶಾಸಕರಾಗಿದ್ದ ಅವಧಿಯಲ್ಲಿ ಕಾರ್ಕಡ ಮೂಲಕ ಅರ್ಧದ ತನಕ ನದಿ ತೀರಕ್ಕೆ ಮಣ್ಣು ರಸ್ತೆಯೊಂದು ರಚನೆಗೊಂಡಿದೆ. ಬಳಿಕ ತಾಲೂಕು ಪಂಚಾಯತಿ ಸದಸ್ಯ ಬಾರಕೂರು ಸತೀಶ್ ಪೂಜಾರಿಯವರು ಮಣ್ಣು ರಸ್ತೆಯನ್ನು ಕಿಂಡಿ ಅಣೆಕಟ್ಟು ತನಕ ಮುಂದುವರಿಸಿದ್ದಾರೆ.

ಕೆ . ಜಯಪ್ರಕಾಶ ಹೆಗ್ಡೆ ಸಚಿವರಾದ ಸಮಯದಲ್ಲಿ ರೈತ ಜನರಿಗೆ ಉಪಯುಕ್ತವಾಗುವಂತೆ ನಾಗರ ಮಠದ ಬಳಿ ಕಿಂಡಿ ಅಣೆಕಟ್ಟು ಮಾಡಿ ಅಟೋ ಮತ್ತು ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಸಂಪರ್ಕ ವ್ಯವಸ್ಥೆ ಮಾತ್ರ ಆಗಿದೆ.
ಬಾವಿಯಲ್ಲಿ ಉಪ್ಪು ನೀರು ಬರುವ ಈ ಭೂಪ್ರದೇಶದ ನದಿಯ ಪಶ್ಚಿಮ ಭಾಗದ ನಾಗರಮಠದಲ್ಲಿರುವ ಬಿಲ್ಲವ ಮತ್ತು ಮೀನುಗಾರ ಕುಟುಂಬದ 20 ಮನೆಗಳಿಗೆ ಬಾರಕೂರು ಗ್ರಾಮ ಪಂಚಾಯತಿ ನದಿಯಲ್ಲಿ ಪೈಪ್ ಅಳವಡಿಸಿ ನಳ್ಳಿ ನೀರು ವ್ಯವಸ್ಥೆ ಮಾಡಿದ್ದಾರೆ.


ಮುಖ್ಯವಾಗಿ ಇಲ್ಲಿನ ಜನರಿಗೆ ಸಂಚಾರಕ್ಕೆ ಕಿರು ಸೇತುವೆ , ರಸ್ತೆ ಮತ್ತು ಕುಸಿದು ಹೋಗುತ್ತಿರುವ ನದಿ ದಂಡೆಗೆ ಕಲ್ಲು ಕಟ್ಟಿದಲ್ಲಿ ಇಲ್ಲಿನ ಭೂಪ್ರದೇಶ ನದಿಯ ಒಡಲು ಸೇರುವುದು ತಪ್ಪುತ್ತದೆ.


ಅನೇಕ ವರ್ಷದ ಹಿಂದೆ ನೀರು ಸರಾಗವಾಗಿ ಹರಿದು ಹೋಗುತ್ತಿದ್ದು ಇಲ್ಲಿ ಕಿಂಡಿ ಅಣೆಕಟ್ಟು ಆದ ಬಳಿಕ ತಿರುವಿನ ಜಾಗದಲ್ಲಿ ಸಹಸ್ರಾರು ಲೋಡು ಮರಳ ದಿಬ್ಬ ರಚನೆಗೊಂಡು ಕುದ್ರು ಆಗುವ ಹಂತ ತಲುಪಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಲ್ಲಿನ ಮರಳದಿಬ್ಬ ತೆರವು ಮಾಡಬೇಕಾದ ಅಗತ್ಯತೆ ಇದೆ.


ರೈತರು ಮತ್ತು ಹೈನುಗಾರರು ಹೆಚ್ಚು ಇರುವ ಇಲ್ಲಿ ಮುದಿವಯಸ್ಸಿನವರಿಗೆ ಅನೀರೀಕ್ಷಿತ ಆರೋಗ್ಯ ಸಮಸ್ಯೆ ಬಂದಲ್ಲಿ ತುರ್ತು ಆ್ಯಂಬುಲೆನ್ಸ್ ಕೂಡಾ ಸಂಚರಿಸದಂತ ಸಂಪರ್ಕ ರಸ್ತೆ ಇಲ್ಲಿ ಇಲ್ಲ.


ಕಳೆದ 20 ವರ್ಷದಿಂದ ಇಲ್ಲಿನ ಜನರ ಬೇಡಿಕೆಯನ್ನು ಸ್ಥಳೀಯ ಗ್ರಾಮ ಪಂಚಾಯತಿಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳಿಗೆ ಭೇಟಿಯಾಗಿ ಸಮಸ್ಯೆ ತಿಳಿಸಿದ ಪ್ರಯುಕ್ತ ಹಣ ಮಂಜೂರುಗೊಂಡಿದೆ ಎಂದು ಹೇಳುತ್ತಾರೆ ಹೊರತು, ಯಾವೂದೇ ಕಾಮಗಾರಿ ಮಾತ್ರ ಈ ತನಕ ಆಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

Advertisement. Scroll to continue reading.

ಇಲ್ಲಿ ಮಣ್ಣಿನ ಪ್ರೀತಿ ಭೂಮಿಯ ಪ್ರೀತಿ ಇದ್ದ ಕಾರಣ ನಾವೆಲ್ಲ ಇಲ್ಲಿ ಉಳಿದುಕೊಂಡಿದ್ದೇವೆ. ಯುವ ಜನತೆ ಯಾರೂ ಕೂಡಾ ಇಲ್ಲಿ ಇರಲು ಬಯಸುವುದಿಲ್ಲ. ಬಹುತೇಕ ಕಡೆಯಲ್ಲಿ ಆದ ಅಭಿವೃದ್ಧಿಯ ಕುರಿತು ನಾವು ಖುಶಿಪಡುತ್ತೇವೆ. ಆದರೆ ನಮ್ಮ ಭಾಗದಲ್ಲಿ ನಮ್ಮ ಬೇಡಿಕೆ ಯಾವಾಗ ಈಡೇರುತ್ತದೋ ಗೊತ್ತಿಲ್ಲ.ಐತ ಪೂಜಾರಿ ನಾಗರಮಠ, ಹಿರಿಯ ನಾಗರೀಕರು, ಹೈನುಗಾರ, ಕೃಷಿಕರು

ಕುಂದಾಪುರ ವಿಧಾನಸಭಾ ಕ್ಷೇತ್ರ ಎಲ್ಲಾ ಕಡೆ ಅಭಿವೃದ್ಧಿಯನ್ನು ಕಂಡಿದೆ. ಆದರೆ ಬಾರಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಭಾಗಕ್ಕೆ ಮಾತ್ರ ಮಲತಾಯಿ ಧೋರಣೆ ಕಂಡು ಬರುತ್ತಿದೆ. ಗ್ರಾಮದ ಜನರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಅನೇಕ ಬಾರಿ ಬೇಟಿಯಾಗಿ ಸಮಸ್ಯೆ ತಿಳಿಸಿದ್ದೇವೆ. ಆದರೆ, ಸರಕಾರಿ ಮಟ್ಟದಲ್ಲಿ ಈ ತನಕ ಅಭಿವೃದ್ಧಿಯ ಬಳಕೆ ಏನೂ ಆಗಿಲ್ಲ .ಪ್ರವೀಣ್ ಮರಕಾಲ, ಬಾರಕೂರು ಗ್ರಾಮಪಂಚಾಯತಿ ನಾಗರಮಠ ವಾರ್ಡ್, ಸದಸ್ಯರು

ನಮ್ಮ ಹಿರಿಯರು ಇಲ್ಲಿಯೇ ಹುಟ್ಟಿ ಬೆಳೆದವರು ನಾವು ಕೂಡಾ ಇಲ್ಲಿ ಇದ್ದೇವೆ. ದೇಶ, ರಾಷ್ಟ್ರ, ಅದೆಷ್ಟೋ ಮುಂದುವರಿದಿದೆ. ಆದರೆ ನಾವು ಇರುವ ಜಾಗ ಪ್ರದೇಶ ಮಾತ್ರ 50 ವರ್ಷದ ಹಿಂದೆ ಇದ್ದ ಅನುಭವವಾಗುತ್ತದೆ. ಸೇತುವೆ, ಸಂಪರ್ಕ ರಸ್ತೆ ನಮ್ಮ ಪ್ರಮುಖ ಬೇಡಿಕೆಯಾಗಿದೆ.ಸರಸ್ವತೀ ಪೂಜಾರಿ, ಗೃಹಿಣಿ, ನಾಗರಮಠ ನಿವಾಸಿ

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com