ಉಡುಪಿ : ಜಿ.ರಾಜಶೇಖರ್ ನುಡಿನಮನ; ಜಿ.ರಾಜಶೇಖರ್ ಅವರ ಸಹಬಾಳ್ವೆಯ ಕನಸು ತಿರುಕನ ಕನಸಾಗದಿರಲಿ : ಪ್ರೊ. ಮುರಳೀಧರ ಉಪಾಧ್ಯ
Published
0
ಉಡುಪಿ : ರಥಬೀದಿ ಗೆಳೆಯರು ಉಡುಪಿ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಸಹಬಾಳ್ವೆ ಉಡುಪಿ ಸಹಯೋಗದಲ್ಲಿ ಅಗಲಿದ ವಿಮರ್ಶಕ, ಚಿಂತಕ ಜಿ.ರಾಜಶೇಖರ್ ಅವರಿಗೆ ರವಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.
ಈ ವೇಳೆ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಮಾತನಾಡಿ, ಕನಕ ವಾದಿರಾಜರ ಉಡುಪಿಯಲ್ಲಿ, ಬಪ್ಪ ಕ್ಷೇತ್ರವಿರುವ ತುಳುನಾಡಲ್ಲಿ, ಭಾರತ ಜನನಿಯ ತನುಜಾತೆಯ ಕರ್ನಾಟಕದಲ್ಲಿ ಜಿ.ರಾಜಶೇಖರ್ ಅವರ ಸಹಬಾಳ್ವೆಯ ಕನಸು ತಿರುಕನ ಕನಸಾಗದಿರಲಿ. ಅನ್ಯರಿಗೆ ಅಸಹ್ಯ ಪಡದಂತೆ ಬದುಕುವುದು ಒಡನಾಡಿ ರಾಜಶೇಖರ್ ಅವರಿಗೆ ನಾವು ನಿರ್ಮಿಸುವ ಜಂಗಮ ಸ್ಮಾರಕವಾಗುತ್ತದೆ ಎಂದರು.
ಸಿಪಿಎಂ ಹಿರಿಯ ಮುಖಂಡ ಅದಮಾರು ಶ್ರೀಪತಿ ಆಚಾರ್ಯ ಮಾತನಾಡಿ, ಜೀವನಪೂರ್ತಿ ಹೋರಾಡುತ್ತಲೇ ಬಂದ ಜಿ.ರಾಜಶೇಖರ್, ಅದರಲ್ಲಿ ಗೆದ್ದರೋ ಸೋತರೋ ಗೊತ್ತಿಲ್ಲ. ಆದರೆ, ಹೋರಾಟವೇ ಅವರ ಜೀವನದ ಉಸಿರಾಗಿತ್ತು. ನಾವೆಲ್ಲ ಮರೆಯಲು ಸಾಧ್ಯವೇ ಇಲ್ಲದ ರೀತಿಯಲ್ಲಿ ಅವರು ಹೋರಾಡಿದರು ಎಂದರು.
ದಸಂಸ ಅಂಬೇಡ್ಕರ್ ವಾದ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಾರಾಮ್ ತೋಳ್ಬಾಡಿ, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಶಿಕ್ಷಣ ತಜ್ಞ ಪ್ರೊ.ಮಹಾಬಲೇಶ್ವರ ರಾವ್, ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಕವಯಿತ್ರಿ ಜ್ಯೋತಿ ಗುರುಪ್ರಸಾದ್, ಪ್ರಾಂಶುಪಾಲೆ ಅಭಿಲಾಷ, ಉಪನ್ಯಾಸಕಿ ಸುಮಾ, ಲೇಖಕ ಭಾಸ್ಕರ್ ರಾವ್ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭ ಹಿರಿಯ ವಿಜ್ಞಾನಿ ಕೆ.ಪಿ.ರಾವ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಹಿರಿಯ ಚಿಂತಕ ನಾರಾಯಣ ಮಣೂರು, ಲೇಖಕ ರಾಜರಾಮ್ ತಲ್ಲೂರು, ಪ್ರೊ. ಹಯವದನ ಉಪಾಧ್ಯ, ಹುಸೇನ್ ಕೋಡಿಬೆಂಗ್ರೆ, ಇದ್ರೀಸ್ ಹೂಡೆ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ, ಅನ್ಸಾರ್ ತೋನ್ಸೆ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ವಂದಿಸಿದರು. ಹಿರಿಯ ಚಿಂತಕ ಪ್ರೊ. ಫಣಿರಾಜ್ ನಿರೂಪಿಸಿದರು.