ಲೇಖಕ : ರಾಜಶೇಖರ ಮೂರ್ತಿ, ತಹಶೀಲ್ದಾರ್, ಬ್ರಹ್ಮಾವರ
ಬ್ರಹ್ಮಾವರ : ಕರಾವಳಿ ಕರ್ನಾಟಕವು ಸಮುದ್ರದಂತೆಯೇ ಅನೇಕ ರತ್ನಗಳನ್ನು ತನ್ನೊಳಗೆ ತುಂಬಿಕೊಂಡಿದೆ. ಆದರೆ ಅದನ್ನು ಗುರುತಿಸುವ ಕೆಲಸವನ್ನು ನಮ್ಮವರು ಪ್ರಾಮಾಣಿಕವಾಗಿ ಮಾಡಿಲ್ಲ ಎನಿಸುತ್ತದೆ. ಕೆಲವರು ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಪಡೆದಿದ್ದರೆ, ಕೆಲವರು ಜನರ ನೆನಪಿಗೇ ಬಂದಿಲ್ಲದಿರುವುದು ಸತ್ಯ. ಆದರೆ ಸೂರ್ಯನನ್ನು ಹೇಗೆ ಮುಚ್ಚಿಡಲು ಸಾಧ್ಯವಿಲ್ಲವೊ ಹಾಗೆ ಸಾಧಕರ ಸಾಧನೆಯನ್ನು ಕೂಡ ಮುಚ್ಚಿಡಲು ಸಾಧ್ಯವಿಲ್ಲ. ಅದು ಕಾಲಗರ್ಭವನ್ನು ಸೀಳಿ ಖಂಡಿತ ಹೊರಬರುತ್ತದೆ. ಸ್ವತಂತ್ರ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದ ಸಾಧಕರನ್ನು ನೆನೆಯುವ ಮತ್ತು ಗೌರವಿಸುವ ಹೊಣೆ ನಮ್ಮೆಲ್ಲರದೂ ಆಗಿದೆ. ಇಂತಹ ಹುಡುಕಾಟದ ಸಂದರ್ಭದಲ್ಲಿ ನನಗೆ ಕಂಡುಬಂದವರು ಬ್ರಹ್ಮಾವರದ ಕೋಟತಟ್ಟು ಮೂಲದ ಹಾಲಿ ಚೆನ್ನೈನಲ್ಲಿ ವಾಸವಿರುವ ಡಾ.ಹೆಚ್.ವಿ.ಹಂದೆಯವರು.
2014 ರಲ್ಲಿ ನಾನು ಆನ್ ಲೈನ್ ಮೂಲಕ ಡಾ.ಹೆಚ್.ವಿ.ಹಂದೆಯವರು ಬರೆದಿರುವ Ambedkar and the making of the constitution ಎಂಬ ಕೃತಿಯನ್ನು ಖರೀದಿಸಿ ಅಧ್ಯಯನ ಮಾಡಿದ್ದೆ. ಆದರೆ ಶ್ರೀಯುತರು ಉಡುಪಿ ಜಿಲ್ಲೆಯವರು ಅರ್ಥಾತ್ ಕರ್ನಾಟಕದವರು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಮೊನ್ನೆ ಇದೇ ಕೃತಿಯನ್ನು ಮತ್ತೊಮ್ಮೆ ತಿರುವಿ ಹಾಕುವಾಗ ಇವರ ಹೆಸರನ್ನು ಕೋಟತಟ್ಟುವಿನಲ್ಲಿ ಕೊರಗರ ಮೇಲೆ ದೌರ್ಜನ್ಯದ ಆರೋಪ ಬಂದ ಸಂದರ್ಭದಲ್ಲಿ ಕೇಳಿದ್ದ ನೆನಪಾಯಿತು. ಕೂಡಲೇ ವಿಕಿಪೀಡಿಯದಲ್ಲಿ ಹುಡುಕಿದೆ ಹಂದೆಯವರು ಚೆನ್ನೈ ವಾಸಿಗಳು ಮತ್ತು ಅವರಿಗೀಗ 95 ವರ್ಷಗಳು ಎಂಬ ವಿಷಯ ತಿಳಿಯಿತು. ಆದರೆ ಇದನ್ನು ಖಚಿತ ಪಡಿಸಿಕೊಳ್ಳಬೇಕಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಹೆಗಡೆಯವರ ಆಪ್ತರಾದ ಶ್ರೀ ಶೆಟ್ಟಿಗಾರರ ನೆರವಿನಿಂದ ಡಾ.ಹಂದೆಯವರ ಮೊಬೈಲ್ ನಂಬರ್ ಪಡೆದು ಕರೆಮಾಡಿದೆ. ಅವರ ಮಾತು ಕೇಳಿ ನಿಜಕ್ಕೂ ರೋಮಾಂಚನ ಉಂಟಾಯಿತು. ಬಹುಶಃ ಆಗಸ್ಟ್ 12 ರಂದು ಇಡೀ ದಿನ ಮನಸ್ಸು ತುಂಬಾ ಖುಷಿಯಾಗಿರಲು ಅವರ ಜೊತೆ ಮಾತನಾಡಿದ್ದೇ ಕಾರಣವಾಯಿತು. ಅವರ ಮಾತನ್ನು ರೆಕಾರ್ಡ್ ಮಾಡಿಕೊಂಡು ಪದೇಪದೇ ಕೇಳಿ ಖುಷಿ ಪಟ್ಟೆ ಮಾತ್ರವಲ್ಲದೆ ನನ್ನ ಕಛೇರಿ ಸಿಬ್ಬಂದಿಗೆ ಮತ್ತು ಆಪ್ತರಿಗೆ ಕೇಳಿಸಿ ಸಂತಸ ಪಟ್ಟೆ. ಅವರ ವ್ಯಕ್ತಿ ವಿವರ ನಾನು ಸಂಗ್ರಹ ಮಾಡಿದಂತೆ ಹೀಗಿದೆ.
1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ವಿದ್ಯಾರ್ಥಿಯಾಗಿದ್ದ ಡಾ.ಹಂದೆಯವರು ಭಾಗವಹಿಸಿದ್ದರಲ್ಲದೆ ಪೊಲೀಸರಿಂದ ಲಾಠಿಯ ರುಚಿ ನೋಡಿದ್ದರು. 1950 ರಿಂದ ಅವರು ಮದ್ರಾಸ್ ನ ಹಲವು ಹಿಂದುಳಿದ ಪ್ರದೇಶಗಳಲ್ಲಿ ತಮ್ಮ ವೈದ್ಯಕೀಯ ಸೇವೆ ಸಲ್ಲಿಸಿದರು. 1965 ರ ಬಳಿಕ ಅವರು ಚಕ್ರವರ್ತಿ ರಾಜಗೋಪಾಲ ಆಚಾರಿಯವ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಬೆಳೆದರು.ಅವರು ತಮಿಳುನಾಡು ವಿಧಾನ ಸಭೆಗೆ ಐದು ಬಾರಿ ಆಯ್ಕೆಯಾದರು. 1980 ಮತ್ತು 1984 ರಲ್ಲಿ ಶ್ರೀ ಎಮ್.ಜಿ.ರಾಮಚಂದ್ರನ್ ರವರ ಮಂತ್ರಿ ಮಂಡಲದಲ್ಲಿ ಆರೋಗ್ಯ ಸಚಿವರಾಗಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಅವರು ಮಹಿಳೆಯರು ಮಕ್ಕಳು ಮತ್ತು ಕುಟುಂಬದ ಆರೋಗ್ಯಕ್ಕೆ ನೀಡಿದ ಕೊಡುಗೆ ಮತ್ತು ಮಾಡಿದ ಸಾಧನೆಗಾಗಿ 1985 ರಲ್ಲಿ ಇಂಡಿಯನ್ ಮೆಡಿಕಲ್ ಕೌನ್ಸಿಲ್ ವತಿಯಿಂದ ಅವರಿಗೆ ಪ್ರತಿಷ್ಠಿತ ಡಾ. ಬಿ.ಸಿ.ರಾಯ್ ಪ್ರಶಸ್ತಿ ದೊರೆಯಿತು. ಈ ಪ್ರಶಸ್ತಿ ಪಡೆದ ಮೊದಮೊದಲ ಆರೋಗ್ಯ ಸಚಿವ ಅವರಾಗಿದ್ದರು. ಪ್ರಧಾನ ಮಂತ್ರಿ ಶ್ರೀ ನರಸಿಂಹ ರಾವ್ ರವರು ಹಂದೆಯವರನ್ನು Central family welfare committee ಗೆ ಅಧ್ಯಕ್ಷರನ್ನಾಗಿ ನೇಮಿಸಿದರು.ಪೋಲಿಯೊ ನಿರ್ಮೂಲನೆಗೆ ಅವರು ನೀಡಿದ ಸೇವೆಗಾಗಿ ರೋಟರಿ ಇಂಟರ್ ನ್ಯಾಷನಲ್ ವತಿಯಿಂದ ಹಂದೆಯವರು 2001 ಮತ್ತು 2015 ರಲ್ಲಿ ಇಂಟರ್ ನ್ಯಾಷನಲ್ ರೋಟೇರಿಯನ್ ಡಾ.ಕೆನ್ ಹಾಬ್ಸ್ ರವರೊಡಗೂಡಿ For the sake of honour ಪ್ರಶಸ್ತಿ ಪಡೆದುಕೊಂಡರು. ಅವರು 22 ವರ್ಷಗಳ ಕಾಲ ತಮಿಳುನಾಡಿನ ವಿಧಾನ ಸಭೆಯಲ್ಲಿ ಮಾಡಿದ ಸೇವೆಯನ್ನು ಅಧ್ಯಯನ ಮಾಡಿ ಶ್ರೀಮತಿ ಪಿ.ಸುಮತಿಯವರು ಎಮ್ ಫಿಲ್ ಪಡೆದಿರುವುದು ವಿಶೇಷ.
ಅವರು 8 ವರ್ಷಗಳ ನಿರಂತರ ಶ್ರಮದಿಂದ ಆಂಗ್ಲ ಬಾಷೆಯಲ್ಲಿ ಬರೆದ ಬರೆದ ಕಂಬರಾಮಾಯಣ ಕಾವ್ಯವನ್ನು ಭಾರತೀಯ ವಿದ್ಯಾ ಭವನವು ಪ್ರಕಟಿಸಿತು.
ಭಾರತೀಯ ಬೌದ್ಧಿಕ ವಲಯದಲ್ಲಿ ಈ ಕೃತಿಯು ಅತ್ಯಂತ ಪ್ರೀತಿಯಿಂದ ಸ್ವೀಕೃತವಾಯಿತು. ತಮಿಳು ಭಾಷೆಯ ಈ ಶ್ರೇಷ್ಠ ಪುರಾಣವನ್ನು ಮೊದಲ ಬಾರಿಗೆ ಆಂಗ್ಲ ಭಾಷೆಗೆ ಅನುವಾದಿಸಿ ಅವರು ಇತಿಹಾಸ ನಿರ್ಮಿಸಿದರು.ಅವರ ಮಾತೃಭಾಷೆ ಕನ್ನಡವಾಗಿದ್ದು scholarly language ತೆಲುಗು ಆಗಿದ್ದರೂ ಸಹ ತಮಿಳು ಭಾಷೆಯ ಈ ಕೃತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದು ಒಂದು ಇತಿಹಾಸ.ವಿಶ್ವಾದ್ಯಂತ 150 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಇಂಟರ್ ನ್ಯಾಷನಲ್ ಕಂಬನ್ ಅಕಾಡೆಮಿಯ ಅಧ್ಯಕ್ಷರಾಗಿದ್ದ ದಿವಂಗತ ನಿವೃತ್ತ ಮುಖ್ಯನ್ಯಾಯಮೂರ್ತಿ ಎಮ್.ಎಮ್.ಇಸ್ಮಾಯಿಲ್ ರವರು ಇದಕ್ಕೆ ಮುನ್ನುಡಿ ಬರೆದಿದ್ದಾರೆ.ಈ ಕೃತಿಯನ್ನು 1997 ರಲ್ಲಿ ಚೆನ್ನೈನಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮರವರು ಬಿಡುಗಡೆ ಮಾಡಿದ್ದರು.ಅವರು ತಮಿಳಿನಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರ ಜೀವನ ಚರಿತ್ರೆಯನ್ನು ಬರೆದರು. ಇದನ್ನು 1998 ರಲ್ಲಿ ಮಹಾರಾಷ್ಟ್ರದ ಮಾಜಿ ಗವರ್ನರ್ ಮತ್ತು ಕೇಂದ್ರ ಸಚಿವರೂ ಆಗಿದ್ದ ದಿವಂಗತ. ಸಿ.ಸುಬ್ರಹ್ಮಣ್ಯಂ ರವರು ಲೋಕಾರ್ಪಣೆ ಮಾಡಿದ್ದರು.ಅವರು ಬರೆದಿರುವ ವಿವಾದಾತ್ಮಕ ಕೃತಿ ಎಂದೇ ಕರೆಯಲ್ಪಟ್ಟಿರುವ Our Constitution -Distortion done during Emergency ಎಂಬ ಕೃತಿಯನ್ನು 2002 ರಲ್ಲಿ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಬಿಡುಗಡೆ ಮಾಡಿದರು.
2009 ರಲ್ಲಿ ಅವರು ಬರೆದ Ambedkar and the making of the Indian constitution ಕೃತಿಗೆ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು ಮುನ್ನಡಿ ಬರೆದಿದ್ದಾರೆ.ಬಾಬಾಸಾಹೇಬರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಬರೆದಿರುವ ಈ ಕೃತಿಯ ಬಗ್ಗೆ ದಿನಾಂಕ.14.4.2009 ರಂದು ದೆಹಲಿಯಲ್ಲಿ ನಡೆದ ದಲಿತ್ ಮೋರ್ಚಾ ಕಾರ್ಯಕ್ರಮದಲ್ಲಿ ಶ್ರೀ ಎಲ್.ಕೆ.ಅಡ್ವಾಣಿಯವರು ಮುಕ್ತವಾಗಿ ಪ್ರಶಂಸೆ ಮಾಡಿದ್ದಾರೆ. ಕೃತಿಯ ಹಿಂದಿ ಅವತರಣಿಕೆಯನ್ನು 2013 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಕೃತಿಯ ಕನ್ನಡ ಅವತರಣಿಕೆಯನ್ನು ಮುಖ್ಯ ಮಂತ್ರಿ ಶ್ರೀ ಡಿ.ವಿ.ಸದಾನಂದ ಗೌಡರು ಮತ್ತು ಶ್ರೀ ಬಿ.ಎಸ್. ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದಾರೆ.ಇಂತಹ ಬಹುದೊಡ್ಡ ಸಾಧಕರನ್ನು ಸ್ವತಂತ್ರ ಮಹೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರಿಂದು ಚೆನ್ನೈ ನಲ್ಲಿ ಸಾಮಾನ್ಯ ವಕೀಲರಾಗಿ ಜನಸೇವೆ ಮಾಡುತ್ತಿದ್ದಾರೆ. ನಾನು ಅವರಿಗೆ ಕರೆಮಾಡಿ 75 ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಜನತೆಗೆ ಸಂದೇಶವನ್ನು ಮನವಿ ಮಾಡಿದಾಗ ” ದೇಶದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು” ಎಂದು ಕರೆ ನೀಡಿದರು. ರಾಜ್ಯಾಂಗ ಸಭೆಯ ರಚನೆಯ ಸಂದರ್ಭ,ಡಾ.ಅಂಬೇಡ್ಕರ್ ರವರು ಮುಂಬಯಿಯಿಂದ ಸಂವಿಧಾನ ಸಭೆಗೆ ಆಯ್ಕೆಯಾಗಲು ವಿಫಲರಾದದ್ದಕ್ಕೆ ಕಾರಣ ,ಜೋಗೆಂದ್ರನಾಥ್ ಮಂಡಲ್ ರವರ ತ್ಯಾಗ,ಅನುಚ್ಛೇದ 370 ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀಯುತರು ಶತಾಯುಷಿಗಳಾಗಿ ಇನ್ನಷ್ಟು ಸೇವೆ ಸಲ್ಲಿಸಲಿ ಎಂದು ಅವರಿಗೆ ವಂದಿಸಿ ಶುಭ ಕೋರುತ್ತೇನೆ.