ಬೈಂದೂರು: ಮತ್ಸ್ಯ ಸಂಪತ್ತನ್ನು ಬಳಸಿಕೊಳ್ಳುವ ಮೂಲಕ ಮೀನುಗಾರಿಕೆಗೆ ಸಹಕಾರಿಯಾಗುವ ಉದ್ಯಮ ಈ ಭಾಗಕ್ಕೆ ಅಗತ್ಯವಾಗಿದೆ. ಬಲಿತ ಮೀನುಗಳನ್ನು ಬಳಸಿಕೊಂಡು, ಮೀನುಗಾರಿಕೆಗೆ ಆಶ್ರಯವಾಗುವ ಈ ಉದ್ಯಮ ಯಶಸ್ವಿಯಾಗಿ ಬೆಳೆಯಲಿ. ಗೋವಿಂದ ಬಾಬು ಪೂಜಾರಿಯವರಲ್ಲಿ ಪರಿಶ್ರಮ, ಶೃದ್ದೆ ಇದೆ. ಅದು ಅವರನ್ನು ಯಶಸ್ಸಿನೆಡೆಗೆ ಕೊಂಡೋಯ್ಯುತ್ತದೆ ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಮತ್ಸ್ಯ ಬಂಧನ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಿರ್ಮಾಣವಾಗುವ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮತ್ಸ್ಯಬಂಧನ ಮೀನಿನ ಮೌಲ್ಯವರ್ಧಿತ ಖಾದ್ಯಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಜೂನ್ನಲ್ಲಿಯೇ ಬಿಡುಗಡೆಗೊಳಿಸಿದ್ದಾರೆ. ಮೀನಿನ ಖಾದ್ಯಗಳ ಮಾರುಕಟ್ಟೆ ವ್ಯವಸ್ಥೆಗೆ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.
ಇವತ್ತು ರಾಜ್ಯದ ಮೂರು ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆ ನಡೆಯುತ್ತದೆ. 27 ಜಿಲ್ಲೆಗಳಲ್ಲಿ ಒಳನಾಡು ಮೀನುಗಾರಿಕೆ ನಡೆಯುತ್ತದೆ. 4.5ಲಕ್ಷ ಟನ್ ಮೀನು ಕಡಲ ಮೀನುಗಾರಿಕೆಯಿಂದ ದೊರೆತರೆ, 2.5ಲಕ್ಷ ಟನ್ ಮೀನು ಒಳನಾಡು ಕೆರೆಗಳಲ್ಲಿ ದೊರೆಯುತ್ತದೆ. ದೇಶದಲ್ಲಿಯೇ ಕಡಲ ಮೀನುಗಾರಿಕೆಯಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ. ಇನ್ನೆರಡು ವರ್ಷದಲ್ಲಿ ಅದು ಮೊದಲ ಸ್ಥಾನಕ್ಕೆ ಬರುವುದು ನಮ್ಮ ಗುರಿ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಮೀನುಗಾರಿಕಾ ಬೋಟ್ಗಳಿಗೆ ಈಗ ಚೈನಾ ಮೇಡ್ ಯಂತ್ರಗಳ ಬಳಸಲಾಗುತ್ತದೆ. ಪ್ರಧಾನಿಯವರ ಚಿಂತನೆಯ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಂತೆ ದೇಶಿ ನಿರ್ಮಿತ ಯಂತ್ರಗಳನ್ನು ಬೋಟ್ಗಳಿಗೆ ಬಳಸುವಂತಾದರೆ ಮೀನುಗಾರರು ಸ್ವಾಗತಿಸುತ್ತಾರೆ. ಮೀನುಗಾರರು ದೇಶಿ ಯಂತ್ರಗಳ ಬಗ್ಗೆ ಒಲವು ಹೊಂದಿದ್ದಾರೆ. ದೇಶಿ ಕಂಪೆನಿಗಳ ಯಂತ್ರಗಳನ್ನು ಚೀನಿ ಯಂತ್ರಗಳ ಗುಣಮಟ್ಟಕ್ಕೆ ಕಡಿಮೆಯಾಗದ ರೀತಿಯಲ್ಲಿ, ಸ್ಪರ್ಧಾತ್ಮಕ ಬೆಲೆಯ ಯಂತ್ರಗಳನ್ನು ಸಿದ್ಧವಾದರೆ ಮೀನುಗಾರರ ಸ್ವಾಭಿಮಾನಕ್ಕೂ ಕಾರಣವಾಗುತ್ತದೆ. ಈ ಬಗ್ಗೆ ಸಂಸದರು ವಿಶೇಷ ಒತ್ತು ನೀಡಬೇಕು ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯ ಜನರು ಬುದ್ಧಿವಂತರು, ಸ್ವಾಭಿಮಾನಿಗಳು. ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಭಾಗದಲ್ಲಿ ಮತ್ಸ್ಯ ಸಂಪತ್ತನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನವಾಗಿಸುವ ನಿಟ್ಟಿನಲ್ಲಿ ಗೋವಿಂದ ಬಾಬು ಪೂಜಾರಿಯವರು ಮತ್ಸ್ಯ ಬಂಧನ ಸಂಸ್ಥೆಯ ಮೂಲಕ ಮುಂದಾಗಿರುವುದು ಸ್ವಾಗತಾರ್ಹ ಎಂದು ಈ ಸಂದರ್ಭದಲ್ಲಿ ಸಂಸದರು ಬಾಬು ಗೋವಿಂದ
ಪೂಜಾರಿ ಅವರನ್ನು ಅಭಿನಂದಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈದರು.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಎಂ.ಡಿ ಎಂ.ಎಲ್ ದೊಡ್ಮನಿ, ಬೈಂದೂರು ತಾ.ಪಂ.ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿ.ಪಂ.ಸದಸ್ಯ ಶಂಕರ ಪೂಜಾರಿ, ದ.ಕ-ಉಡುಪಿ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕುಂದಾಪುರ ತಾ.ಪಂ.ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಉಡುಪಿ ಜಿ.ಪಂ.ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾ.ಪಂ.ಸದಸ್ಯ ವಿಜಯ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರು, ಜ್ಯೋತಿಷಿ ರಘುನಾಥ ಜೋಯಿಸ್, ಉದ್ಯಮಿ ವೆಂಕಟೇಶ್ ಕಿಣಿ, ಗೋಳಿಹೊಳೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ದಿವಾಕರ ಶಾನುಭಾಗ್, ಉದ್ಯಮಿ ಗುರುರಾಜ ಪಂಜು ಪೂಜಾರಿ, ಗ್ರಾ.ಪಂ.ಸದಸ್ಯ ವಸಂತ ಹೆಗ್ಡೆ, ಸಾಯಿದತ್ತಿ ಗುತ್ತೆದಾರ್ ಮೊದಲಾದವರು ಉಪಸ್ಥಿತರಿದ್ದರು.
ಮತ್ಸ್ಯಬಂಧನ ಪ್ರೈ.ಲಿನ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ಅರುಣ್ ಧನಪಾಲ್ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮಿಮಿಕ್ರಿ ಕಲಾವಿದ ಮಂಜುನಾಥ್ ಕುಂದೇಶ್ವರ ಅವರಿಂದ ಹಾಸ್ಯ ಕಾರ್ಯಕ್ರಮ, ಗಾಯಕಿ ಗೀತ ಪೂಜಾರಿ ಬೈಂದೂರು ಇವರಿಂದ ಸುಗಮ ಸಂಗೀತ ನಡೆಯಿತು.
ವರದಿ : ದಿನೇಶ್ ರಾಯಪ್ಪನಮಠ