ಕರಾವಳಿ

ಉಡುಪಿ : ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ನೋಂದಾಯಿಸಲು ಅವಕಾಶ

0

ಉಡುಪಿ : ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿದ್ದು, ಇಂತಹ ಕಾರ್ಮಿಕರು ಅಪಘಾತಕ್ಕಿಡಾಗಿ ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಅಪಘಾತದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಯಡಿ ಚಾಲಕರೊಂದಿಗೆ ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೂ ಸಹ ಅಪಘಾತ ವಿಮಾ ಸೌಲಭ್ಯವನ್ನು ವಿಸ್ತರಿಸಲು ಪರಿಷ್ಕೃತ ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಸಾರಿಗೆ ಇಲಾಖೆಯಿಂದ ರಾಜ್ಯದಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲನಾ ಪರವಾನಗಿ ಪಡೆದ ಚಾಲಕರು ತಕ್ಷಣದಿಂದ ಫಲಾನುಭವಿಯೆಂದು ಪರಿಗಣಿಸುತ್ತಿದ್ದು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಯೋಜನೆಯಡಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ನೋಂದಣಾಧಿಕಾರಿಗಳನ್ನು ಸಂಪರ್ಕಿಸಿ, ಇತ್ತೀಚಿನ ಎರಡು ಭಾವಚಿತ್ರ ಮತ್ತು ಸ್ಟಾಂಪ್ ಸ್ಶೆಜ್ ಒಂದು ಭಾವಚಿತ್ರ, ವಿಳಾಸದ ಪುರಾವೆ (ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ), ವಯಸ್ಸಿನ ದೃಢೀಕರಣ ಪತ್ರ (ಆಧಾರ ಕಾರ್ಡ್/ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಪಾನ್ ಕಾರ್ಡ್/ನೋಂದಾಯಿತ ಎಂ.ಬಿ.ಬಿ.ಎಸ್ ವೈದ್ಯರಿಂದ ವಯಸ್ಸಿನ ಪ್ರಮಾಣ ಪತ್ರ/ ಶಾಲಾ ದಾಖಲೆ/ ಡಿ.ಎಲ್/ಪಾಸ್ಪೋರ್ಟ್), ಬ್ಯಾಂಕ್ ಖಾತೆ ಪ್ರತಿ, ನಿಗದಿಪಡಿಸಿದ ಉದ್ಯೋಗ ಪ್ರಮಾಣ ಪತ್ರ, ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆ/ಮಾಲೀಕರಿಂದ ಗುರುತಿನ ಚೀಟಿ (ಲಭ್ಯವಿದ್ದಲ್ಲಿ)ಯನ್ನು ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ.


ಅರ್ಜಿದಾರರು ರಾಜ್ಯದ ನಿವಾಸಿಯಾಗಿದ್ದು, 20 ರಿಂದ 70 ವರ್ಷದೊಳಗಿನವರಾಗಿರಬೇಕು. ನಿರ್ವಾಹಕರಿಗೆ ಸಂಬAಧಿಸಿದAತೆ ಮೋಟಾರ್ ವಾಹನಗಳ ಕರ್ನಾಟಕ ನಿಯಮಗಳು 1989ರ ಅಡಿಯಲ್ಲಿ ರಾಜ್ಯದಲ್ಲಿ ನೀಡಲಾಗಿರುವ ಊರ್ಜಿತ ನಿರ್ವಾಹಕರ ಪರವಾನಗಿಯನ್ನು ಸಾರಿಗೆ ಇಲಾಖೆಯಿಂದ ಪಡೆದಿರಬೇಕು. ವಾಣಿಜ್ಯ ಸಾರಿಗೆ ವಾಹನ ಸಂಸ್ಥೆಯಲ್ಲಿ 12 ತಿಂಗಳಲ್ಲಿ 90 ದಿನಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಿರಬೇಕು, ಒಮ್ಮೆ ನೋಂದಾಣಿಯಾದ ನಂತರ ನೀಡಲಾದ ಗುರುತಿನ ಚೀಟಿಯು 3 ವರ್ಷಗಳವರೆಗೆ ಅಸ್ಥಿತ್ವದಲ್ಲಿರುತ್ತದೆ. ನಂತರ ನವೀಕರಣಕ್ಕೆ ನಿಗಧಿಪಡಿಸಿದ ದಾಖಲೆಗಳನ್ನು ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಿ ನವೀಕರಿಸಿಕೊಳ್ಳಬಹುದಾಗಿದೆ.
ನಿರ್ವಾಹಕರು/ಕ್ಲೀನರ್‌ಗಳು ನೋಂದಣಿಯಾದ ನಂತರ ವೃತ್ತಿಯನ್ನು ಬದಲಾಯಿಸಿದಲ್ಲಿ ಫಲಾನುಭವಿಯಾಗಿ ಮುಂದುವರೆಯಲು ಅನರ್ಹರಾಗುತ್ತಾರೆ. ಫಲಾನುಭವಿಯು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಅನುಸೂಚಿ 2ರಲ್ಲಿ ತಿಳಿಸಿರುವ ಕಾಯ್ದೆಗೆ ಒಳಪಟ್ಟಿರಬಾರದು ಮತ್ತು ಸದರಿ ಕಾಯ್ದೆಗೆ ಒಳಪಟ್ಟಿರುವುದಿಲ್ಲ ಎಂದು ಸ್ವಯಂ ಘೋಷಣೆಗೆ ಒಪ್ಪಿ ಸಹಿ ಮಾಡಬೇಕು.

Advertisement. Scroll to continue reading.


ಈ ಯೋಜನೆಯು ಕರ್ನಾಟಕ ರಾಜ್ಯದ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಅನ್ವಯಿಸಲಿದ್ದು, ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತವೆ.


ಯೋಜನೆಯಡಿ ದೊರಕುವ ಅಪಘಾತ ಸೌಲಭ್ಯಗಳು:-


ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ, ಅವರ ನಾಮನಿರ್ದೇಶಿತರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ 2 ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುವುದು.
ಅಪಘಾತಕೊಳ್ಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ 50,000 ರೂ. ರವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೊ ಅದನ್ನು ಹಾಗೂ 15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ 1 ಲಕ್ಷ ರೂ. ವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ ಇವುಗಳಲ್ಲಿ ಯಾವುದು ಕಡಿಮೆಯೊ ಅದನ್ನು ಮರುಪಾವತಿ ಪಡೆಯಬಹುದಾಗಿದೆ.


ಶೈಕ್ಷಣಿಕ ಧನ ಸಹಾಯ: 2018-19 ನೇ ಸಾಲಿನಿಂದ ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10,000 ರೂ.ಗಳ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದ್ದು, ಶೈಕ್ಷಣಿಕ ಸಹಾಯಧನ ಕ್ಕಾಗಿ ನಿಗದಿತ ನಮೂನೆಯಲ್ಲಿ ಮೃತರಾದ/ಸಂಪೂರ್ಣ ಅಂಗ ದುರ್ಬಲತೆ ಉಂಟಾದ ಚಾಲಕರ ಇಬ್ಬರು ಮಕ್ಕಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ನೇರವಾಗಿ ಅಥವಾ ತಾಲೂಕು/ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖಾ ಕಚೇರಿಯಲ್ಲಿ ಸಲ್ಲಿಸಿದ್ದಲ್ಲಿ, ಅದನ್ನು ಪರಿಶೀಲಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು.

Advertisement. Scroll to continue reading.


ಈ ಯೋಜನೆಯಡಿ ನಿರ್ವಾಹಕರು ಮತ್ತು ಕ್ಲೀನರ್‌ಗಳು ಷರತ್ತುಗಳನ್ವಯ ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ಅಧಿಕಾರಿಯವರ ಕಛೇರಿ, ರಜತಾದ್ರಿ ಎ-ಬ್ಲಾಕ್, 1ನೇ ಮಹಡಿ, ಇಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಆಕಸ್ಮಿಕ ಅಪಘಾತಕ್ಕೀಡಾದ ಸಂದರ್ಭದಲ್ಲಿ ಈ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com