ಕೊಚ್ಚಿ : ಕೇರಳದ ಸಭಾ ಭವನ ಒಂದರಲ್ಲಿ ಅನುಮಾನಸ್ಪದ ಸ್ಪೋಟವೊಂದು ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ನಲ್ಲಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇದು ಕ್ರೈಸ್ತರ ಒಂದು ಪಂಗಡದ ಪ್ರಾರ್ಥನಾ ಮಂದಿರವಾಗಿದೆ. ಪ್ರಾರ್ಥನೆಯ ಮಧ್ಯದಲ್ಲೇ ಸ್ಫೋಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 20 ಮಂದಿಯ ಪೈಕಿ, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಸ್ಪೋಟಕ್ಕೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. “ನಮಗೆ ಸ್ಪೋಟದ ಕುರಿತು 9 ಗಂಟೆ ಆಸುಪಾಸಿನಲ್ಲಿ ಕರೆ ಬಂದಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ. “ಸ್ಥಳದಲ್ಲಿ ಹಲವು ಬಾರಿ ಸ್ಪೋಟ ಕೇಳಿಸಿದೆ” ಎಂದು ಸ್ಥಳೀಯರು ಹೇಳಿದ್ದಾರೆ.
ಅಗ್ನಿ ಆಕಸ್ಮಿಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ವಿಡಿಯೋ ದೃಶ್ಯಗಳನ್ನು ಟೀವಿ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಘಟನಾ ಸ್ಥಳದಲ್ಲಿ ಸಾಕಷ್ಟು ಜನರು ಸೇರಿರುವುದು ಕಾಣಿಸುತ್ತಿದೆ. “ಸ್ಫೊಟ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳವು ಸ್ಥಳದಲ್ಲಿದೆ” ಎಂದು ಕೇರಳ ಕೈಗಾರಿಕಾ ಸಚಿವ ಪಿ. ರಾಜೀವ್ ಹೇಳಿದ್ದಾರೆ. ಘಟನೆ ನಡೆದ ತಕ್ಷಣ “ಎಲ್ಲಾ ಆರೋಗ್ಯ ವೃತ್ತಿಪರರು ಕರ್ತವ್ಯಕ್ಕೆ ಮರಳಬೇಕು” ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಸೂಚಿಸಿದ್ದಾರೆ.
Advertisement. Scroll to continue reading.
ಸಿಎಂ ಪಿಣರಾಯಿ ವಿಜಯನ್ ಸಂತಾಪ:
ಕೇರಳ ಸ್ಪೋಟ ಘಟನೆ ಕುರಿತು ದುರಾದೃಷ್ಟಕರ ಘಟನೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಾವಿರಾರು ಕ್ರೈಸ್ತ ಪಂಗಡದ ಯೆಹೋವನ ಸದಸ್ಯರು ಘಟನಾ ಸ್ಥಳದಲ್ಲಿ ನೆರೆದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಝಮ್ರಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್ನಲ್ಲಿ ಸ್ಫೋಟ ನಡೆದಿದೆ. ಅಲ್ಲಿ ಸುಮಾರು 2500ಕ್ಕೂ ಹೆಚ್ಚು ಜನರು ಮೂರು ದಿನದ ಸಮಾವೇಶಕ್ಕಾಗಿ ಆಗಮಿಸಿದ್ದರು. “ಪ್ರಾರ್ಥನಾ ಕಾರ್ಯಕ್ರಮ ಆರಂಭವಾದ ಐದು ನಿಮಿಷದ ಬಳಿಕ ಸ್ಫೋಟ ಸಂಭವಿಸಿದೆ. ಕನ್ವೆನ್ಷನ್ ಹಾಲ್ನ ಸ್ಟೇಜ್ ಸಮೀಪ ಸರಣಿ ಸ್ಪೋಟ ಸಂಭವಿಸಿವೆ” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Advertisement. Scroll to continue reading.