ನವದೆಹಲಿ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ಅಚಾತುರ್ಯ ನಡೆದಿದೆ.
ಪ್ರಸ್ತುತ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿತ್ತು. ಆ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ. ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ. ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಭಕ್ತರು ಆತಂಕಗೊಂಡರು. ಆದರೆ ಕೈ ಸನ್ನೆಯ ಮೂಲಕ ತಮಗೆ ಏನೂ ಆಗಿಲ್ಲ ಎಂದು ಪೇಜಾವರ ಶ್ರೀ ಸನ್ನೆ ಮಾಡಿದ್ದಾರೆ. ಇನ್ನು ತಕ್ಷಣ ವೈದ್ಯರು ಆಗಮಿಸಿ, ಪರೀಕ್ಷಿಸಿ ಇಂಜೆಕ್ಷನ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.