ಉತ್ತರಕಾಶಿ: ಉತ್ತರಕಾಶಿಯಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಒಳಗಡೆ ಸಿಲುಕಿರುವ ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆಯಾಗಿದೆ.
ಸೋಮವಾರ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರಿಗೆ 6 ಇಂಚಿನ ಪೈಪ್ ಮೂಲಕ ಆಹಾರ, ಆಮ್ಲಜನಕ ಪೂರೈಕೆ ಮಾಡುವುದಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಪೈಪ್ ನ ಮೂಲಕ, 8 ದಿನಗಳಿಂದ ಸುರಂಗದ ಒಳಗೆ ಸಿಲುಕಿರುವ 41 ಕಾರ್ಮಿಕರ ದೃಶ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ. ಇದಕ್ಕೂ ಮುನ್ನ ಸುರಂಗದ ಮೇಲ್ಭಾಗದಲ್ಲಿದ್ದ 4 ಇಂಚಿನ ಟ್ಯೂಬ್ ಮೂಲಕ ಆಮ್ಲಜನಕ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿತ್ತು.
ನಾವು 53 ಮೀಟರ್ ಪೈಪ್ನ್ನು ಅವಶೇಷಗಳ ಇನ್ನೊಂದು ಬದಿಗೆ ಕಳುಹಿಸಿದ್ದೇವೆ ಮತ್ತು ಸಿಲುಕಿರುವ ಕಾರ್ಮಿಕರು ನಮ್ಮ ಧ್ವನಿ ಕೇಳುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯಚಸ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಅಂಶು ಮನೀಶ್ ಖಲ್ಖೋ ತಿಳಿಸಿದ್ದಾರೆ.
Advertisement. Scroll to continue reading.
ಉತ್ತರ ಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರ್ ಮತ್ತು ದಾಂಡಲ್ ಗಾಂವ್ ನಡುವೆ ನಿರ್ಮಿಸಲಾಗುತ್ತಿರುವ ನಾಲ್ಕೂವರೆ ಕಿ.ಮೀ ಉದ್ದದ ಸುರಂಗದ 150 ಮೀಟರ್ ನಷ್ಟು ಭಾಗ ನವೆಂಬರ್ 12 ರಂದು ಕುಸಿದಿತ್ತು. ಅದರ ಒಳಗಡೆ 41 ಕಾರ್ಮಿಕರು ಸಿಲುಕಿದ್ದು, ಕಳೆದ ಎಂಟು ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.