ನವದೆಹಲಿ : ತನ್ನ ಫೇಸ್ಬುಕ್ ಗೆಳೆಯ ನಸ್ರುಲ್ಲಾಗಾಗಿ ಪಾಕಿಸ್ತಾನಕ್ಕೆ ತೆರಳಿ ಆತನನ್ನು ಮದುವೆಯಾಗಿದ್ದ ಅಂಜು ಭಾರತಕ್ಕೆ ವಾಪಸಾಗಿದ್ದಾಳೆ. ರಾಜಸ್ಥಾನದ ಭಿವಾಡಿಯ ವಸತಿ ಸಮುಚ್ಛಯದಲ್ಲಿ ವಾಸವಿರುವ ಆಕೆಯ ಮಕ್ಕಳು, ಆಕೆಯನ್ನು ಭೇಟಿಯಾಗಲು ಹಿಂಜರಿದಿದ್ದಾರೆ.
ಇತ್ತೀಚೆಗೆ ವಾಘಾ ಗಡಿ ಮೂಲಕ ಬಂದಿದ್ದ ಅಂಜುಳನ್ನು ಭದ್ರತಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ಆಕೆ ದೆಹಲಿ ಪಯಣಿಸಿದ್ದಳು. ದೆಹಲಿಯಲ್ಲಿ ಇಳಿದ ಬಳಿಕ ಆಕೆ ಎಲ್ಲಿಗೆ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಆಕೆ ಭಿವಾಡಿಗೆ ತಲುಪಿಲ್ಲ. ಅಲ್ಲದೇ ತನ್ನ ಮಕ್ಕಳನ್ನು ಭೇಟಿಯಾಗಿಲ್ಲ. ಇದೀಗ ಅಂಜು ಎಲ್ಲಿದ್ದಾಳೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಅಂಜು ನೆಲೆಸಿರುವ ವಸತಿ ಸಮುದಾಯಕ್ಕೆ ಇದೀಗ ಭದ್ರತೆ ಹೆಚ್ಚಿಸಲಾಗಿದ್ದು, ಎಲ್ಲ ವಾಹನಗಳು ಮತ್ತು ಅಪರಿಚಿತರನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಆ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. ಐಬಿ ಅಧಿಕಾರಿಗಳ ತಂಡವು ಅಂಜು ಅವರ ಮಕ್ಕಳಾದ 15 ವರ್ಷದ ಮಗಳು ಮತ್ತು ಆರು ವರ್ಷದ ಮಗನನ್ನೂ ವಿಚಾರಣೆ ನಡೆಸಿದೆ.
ಅಂಜು ಪ್ರಕರಣದ ತನಿಖೆ ನಡೆಯುತ್ತಿದೆ. ಆಕೆ ಈವರೆಗೂ ಭಿವಾಡಿಗೆ ಆಗಮಿಸಿಲ್ಲ ಎಂಬುದಾಗಿ ಹೇಳಲಾಗಿದೆ.
ಆಕೆ ಎಲ್ಲಿದ್ದಾಳೆ ಎಂಬುದು ಸಹ ಸದ್ಯಕ್ಕೆ ತಿಳಿಯುತ್ತಿಲ್ಲ. ವಿಚಾರಣೆ ನಡೆಸುತ್ತಿದ್ದೇವೆ. ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಭಿವಾಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪಕ್ ಸೈನಿ ಹೇಳಿದ್ದಾರೆ. ಅಂಜು ಅವರನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Advertisement. Scroll to continue reading.
ತನ್ನ ಭಾರತೀಯ ಪತಿ ಅರವಿಂದ್ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ. ಈ ನಡುವೆ ಅರವಿಂದ್ ಅವರನ್ನು ಪಾಕಿಸ್ತಾನದಿಂದ ಹಿಂದಿರುಗಿದ ಪತ್ನಿಯ ಬಗ್ಗೆ ಕೇಳಿದಾಗ, ಅದು ತನಗೆ ತಿಳಿದಿಲ್ಲ ಮತ್ತು ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.
ತಾನು ಮತ್ತು ಅಂಜು ಇನ್ನೂ ವಿಚ್ಛೇದನ ಪಡೆದಿಲ್ಲ. ವಿಚ್ಛೇದನ ನಡೆಯಲು ಮೂರರಿಂದ ಐದು ತಿಂಗಳು ಬೇಕು ಎಂದು ಅರವಿಂದ್ ಹೇಳಿದ್ದಾರೆ. ಇನ್ನೂ ಅಂಜು ಭಾರತಕ್ಕೆ ಬರಲು ಕೇವಲ ಒಂದು ತಿಂಗಳಿಗೆ ಮಾತ್ರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿದ್ದಾರೆ.