ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಿಚಾಂಗ್ ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿನ ಬಾಪಟ್ಲಾದಲ್ಲಿ ಶೀಘ್ರವೇ ಅಪ್ಪಳಿಸುವ ಸಾಧ್ಯತೆ ಇದೆ. ಪರಿಣಾಮ ಚೆನ್ನೈನಲ್ಲಿ ಮಳೆ ಅಬ್ಬರ ಜೋರಾಗಿದೆ. ಅಲ್ಲದೇ, ಈವರೆಗೂ ಎಂಟು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ 1 ರಿಂದ 1.5 ಮೀಟರ್ ಎತ್ತರದ ವರೆಗಿನ ಪ್ರಬಲ ಅಲೆಗಳು ಅಥವಾ ಬಿರುಗಾಳಿ ಕೆಳಮಟ್ಟದ ಪ್ರದೇಶಗಳಿಗೆ ನುಗ್ಗುವ ನಿರೀಕ್ಷೆ ಇದೆ. ಬಾಪಟ್ಲಾ ಮತ್ತು ಕೃಷ್ಣ ಜಿಲ್ಲೆಗಳ ಮೇಲೆ ತೀವ್ರ ಶಕ್ತಿಶಾಲಿ ಬಿರುಗಾಳಿ ಉದ್ಭವಿಸಲಿದೆ. ಗಂಟೆಗೆ ಗರಿಷ್ಠ 90- 100 ಕಿಮೀ ವೇಗದಲ್ಲಿ ತೀವ್ರ ಸ್ವರೂಪದ ಚಂಡಮಾರುತ ಬಿರುಗಾಳಿ ಅಪ್ಪಳಿಸಲಿದೆ ಎನ್ನಲಾಗಿದೆ.
ನದಿಯಂತಾದ ರಸ್ತೆಗಳು :
Advertisement. Scroll to continue reading.
ಚೆನ್ನೈನಲ್ಲಿ ಸೈಕ್ಲೋನ್ ಪರಿಣಾಮದಿಂದ ವಿಪರೀತ ಮಳೆ ಸುರಿದು, ರಸ್ತೆಗಳು ನದಿಯಂತಾಗಿವೆ. ಮಳೆ ಅಪಾಯವಿರುವ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಂದ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ವರ್ಕ್ ಫ್ರಂ ಹೋಂ ಮಾಡುವಂತೆ ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಸೂಚಿಸಿದೆ. ಆದರೆ, ವಿದ್ಯುತ್ ಪೂರೈಕೆ ಮತ್ತು ಇಂಟರ್ನೆಟ್ ಸಂಪರ್ಕದ ವ್ಯತ್ಯಯದಿಂದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ತೊಡಕಾಗಿದೆ. ಭಾರಿ ಗಾಳಿಯಿಂದಾಗಿ ಮರಗಳು, ಗೋಡೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
144 ಸೆಕ್ಷನ್ ಜಾರಿ :
ತಿರುಪತಿ, ನೆಲ್ಲೂರ್, ಪ್ರಕಾಸಂ, ಬಾಪಟ್ಲಾ, ಕೃಷ್ಣ, ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಂಧ್ರ ಸರ್ಕಾರ ಸೂಚನೆ ನೀಡಿದೆ. ಪುದುಚೆರಿಯಲ್ಲಿ ಸಂಜೆ 6 ಗಂಟೆಯವರೆಗೂ ಕರಾವಳಿ ತೀರಗಳಲ್ಲಿ ಜನರ ಓಡಾಟದ ಮೇಲೆ ನಿರ್ಬಂಧ ವಿಧಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
Advertisement. Scroll to continue reading.