ಹೊಸದಾಗಿ ಮದುವೆಯಾಗುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ ಹೊಸ ಹೆಜ್ಜೆ ಇಟ್ಟಿದೆ. ಮಂಗಳಸೂತ್ರಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಹೌದು, ಹೊಸದಾಗಿ ಮದುವೆಯಾಗುವ ಭಕ್ತರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ತಿಮ್ಮಪ್ಪನಿಗೆ ಪಾದಪೂಜೆ ನೆರವೇರಿದ ನಂತರ ನವ ದಂಪತಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ಇದಕ್ಕಾಗಿ ತಿರುಪತಿ ತಿಮ್ಮಪ್ಪನಿಗೆ ಬರುವ ಕಾಣಿಕೆಯ ಬಂಗಾರದಿಂದ 5 ಗ್ರಾಂ ಮತ್ತು 10 ಗ್ರಾಂ ಕರಿಮಣಿಯನ್ನು ಮಾಡಲು ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
2024-25ಕ್ಕೆ ಸಂಬಂಧಿಸಿದಂತೆ, ಆಡಳಿತ ಮಂಡಳಿಯು 5,141 ಕೋಟಿಗಳೊಂದಿಗೆ 2024-25 ರ ಟಿಟಿಡಿಯ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಿದೆ.
Advertisement. Scroll to continue reading.
ನೌಕರರ ವೇತನ ಹೆಚ್ಚಳ :
ಟಿಟಿಡಿ ನೌಕರರ ವಸತಿ ಪ್ರದೇಶಗಳಲ್ಲಿ ಜಲ್ಲಿಕಲ್ಲು ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ನೌಕರರ ವೇತನ ಹೆಚ್ಚಳಕ್ಕೆ ಆಡಳಿತ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಟಿಟಿಡಿ ಅಧೀನದಲ್ಲಿ ನಡೆಯುತ್ತಿರುವ 60 ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ. ಸ್ವಿಮ್ಸ್ ಆಸ್ಪತ್ರೆಯನ್ನು 300 ಹಾಸಿಗೆಗಳಿಂದ 1,200 ಹಾಸಿಗೆಗಳಿಗೆ ವಿಸ್ತರಿಸಲು ಟಿಟಿಡಿ ಮಂಡಳಿಯು ಅನುಮೋದನೆ ನೀಡಿದೆ. ಅನ್ನಮಯ್ಯ ಭವನದ ಜತೆಗೆ ಕುಟೀರಗಳ ಆಧುನೀಕರಣಕ್ಕೆ ಹಾಗೂ ಸಪ್ತಗಿರಿ ಛತ್ರಗಳ ಅಭಿವೃದ್ಧಿಗೆ ಅಪಾರ ಹಣ ಮೀಸಲಿಟ್ಟಿದೆ. ಟಿಟಿಡಿಯಲ್ಲಿ ಒರಾಕಲ್ ಫ್ಯೂಷನ್ ಕ್ಲೌಡ್ ಸಾಫ್ಟ್ವೇರ್ ಬಳಕೆಗೆ ಅನುಮೋದನೆ ನೀಡಲಾಗಿದೆ.
ವಿಜಯವಾಡ ದುರ್ಗದ ಗುಡಿಯ ಆಡಳಿತ ಮಂಡಳಿ ಸಭೆಯಲ್ಲೂ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ದುರ್ಗಮ್ಮನ ದರ್ಶನಕ್ಕಾಗಿ ಎಲಿವೇಟೆಡ್ ಕ್ಯೂಲೈನ್ಗಳನ್ನು ಸ್ಥಾಪಿಸಲು ದುರ್ಗದ ದೇವಸ್ಥಾನದ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಬೆಟ್ಟದ ಮೇಲೆ ಪೂಜಾ ಮಂಟಪ ನಿರ್ಮಾಣಕ್ಕೂ ಅನುಮೋದನೆ ದೊರೆತಿದೆ. ಘಾಟ್ ರಸ್ತೆ ದುರಸ್ತಿ ಕಾಮಗಾರಿ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ದುರ್ಗದ ಗುಡಿ ಆಡಳಿತ ಮಂಡಳಿ ಅಧ್ಯಕ್ಷ ಕರ್ನಾಟಿ ರಾಂಬಾಬು ಹೇಳಿದರು. ಶೀಘ್ರವೇ ಬೆಟ್ಟ ಪ್ರದಕ್ಷಿಣೆ ಮಾರ್ಗದಲ್ಲಿ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
Advertisement. Scroll to continue reading.