ಬೆಂಗಳೂರು: ಸಂಪೂರ್ಣ ಫಿಟ್ನೆಸ್ ಹೊಂದಿದ್ದರೂ ಕೂಡ ಅನಗತ್ಯ ಕಾರಣಗಳನ್ನು ಕೊಟ್ಟು ಪ್ರತಿಷ್ಠಿತ ದೇಶಿ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲು ನಿರಾಕರಿಸಿರುವ ಯುವ ಬ್ಯಾಟರ್ಗಳಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಬಿಸಿಸಿಐ ಶೀಘ್ರವೇ ನೂತನ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟ ಮಾಡುವ ಸಾಧ್ಯತೆ ಇದ್ದು, ಇಬ್ಬರು ಸ್ಟಾರ್ ಆಟಗಾರರು ಈ ಪಟ್ಟಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಸಿಸಿಐ ಮೂಲಗಳು ಹೊರಹಾಕಿರುವ ಮಾಹಿತಿ ಪ್ರಕಾರ ದೇಶಿ ಕ್ರಿಕೆಟ್ ಆಡಲು ನಿರಾಕರಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಆಟಗಾರರು ಬಿಸಿಸಿಐನ ಒಪ್ಪಂದ ಕಳೆದುಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ.
ವೈಟ್ ಬಾಲ್ ಕ್ರಿಕೆಟ್ ಮತ್ತು ರೆಡ್ ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಆಡುತ್ತಾ ಬಂದಿರುವ ಶ್ರೇಯಸ್ ಅಯ್ಯರ್ ಸದ್ಯ ಬಿಸಿಸಿಐನ ‘ಬಿ’ ಗುಂಪಿನ ಒಪ್ಪಂದ ಪಡೆದು ವಾರ್ಷಿಕ 3 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ವಿಕೆಟ್ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ‘ಸಿ’ ಗುಂಪಿನ ಒಪ್ಪಂದ ಪಡೆದಿದ್ದು, ವಾರ್ಷಿಕ 1 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ.
Advertisement. Scroll to continue reading.
ಇಶಾನ್ ಕಿಶನ್ ಮಾನಸಿಕ ಆರೋಗ್ಯದ ಕಾರಣ ನೀಡಿ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದಿದ್ದರು, ಇನ್ನು ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣ ನೀಡಿ ರಣಜಿಯಿಂದ ಹೊರಗುಳಿದಿದ್ದಾರೆ. ಇವರನ್ನು ರಣಜಿ ಪಂದ್ಯದಲ್ಲಿ ಆಡಲು ತಿಳಿಸಲಾಗಿತ್ತು. ಆದರೆ ಇಬ್ಬರೂ ದೇಶೀಯ ಟೂರ್ನಿಯಲ್ಲಿ ಭಾಗವಹಿಸದೆ ಐಪಿಎಲ್ಗೆ ತಯಾರಿ ನಡೆಸುತ್ತಿದ್ದಾರೆ.
ಸುಳ್ಳು ಹೇಳಿದ ಅಯ್ಯರ್: ಬೆನ್ನು ನೋವು ಎಂದು ಶ್ರೇಯಸ್ ಅಯ್ಯರ್ ಸುಳ್ಳು ಹೇಳಿರುವ ಸಂಗತಿಯನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್, ಬಿಸಿಸಿಐ ಗಮನಕ್ಕೆ ತಂದಿದ್ದಾರೆ. ಶ್ರೇಯಸ್ ಅಯ್ಯರ್ಗೆ ಯಾವುದೇ ತರದ ಗಾಯದ ಸಮಸ್ಯೆ ಇಲ್ಲ. ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಪಟೇಲ್ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.
Advertisement. Scroll to continue reading.