ನವದೆಹಲಿ: ಬಿಜೆಪಿಯ ಪ್ರಣಾಳಿಕೆ ಬಹುಮುಖ್ಯ ಘೋಷಣೆಯಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮುಂದಿನ ತಿಂಗಳು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಕಾಯ್ದೆಯ ಪ್ರಕಾರ 2014 ರ ಡಿಸೆಂಬರ್ಗೂ ಮೊದಲು ಭಾರತದಲ್ಲಿ ನೆಲೆಸಿರುವ ಮೂರು ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತದೆ.
ನೋಂದಣಿಗಾಗಿ ಆನ್ಲೈನ್ ಪೋರ್ಟಲ್ ಸಿದ್ಧವಾಗಿದೆ. ಈ ನಿಯಮವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಅನ್ವಯಿಸುತ್ತದೆ. ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಇದು ಜಾರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಿಎಎ ಅನುಷ್ಠಾನ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ದೇಶದ ಕಾನೂನು ಎಂದು ಘೋಷಿಸಿದ್ದರು.
Advertisement. Scroll to continue reading.
ಕಳೆದ ಎರಡು ವರ್ಷಗಳಲ್ಲಿ ಪೌರತ್ವ ಕಾಯಿದೆ-1955 ರ ಅಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಒಂಬತ್ತು ರಾಜ್ಯಗಳ 30 ಕ್ಕೂ ಹೆಚ್ಚು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ನೀಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, 2021 ರ ಏ.1 ರಿಂದ ಡಿಸೆಂಬರ್ 31 ರ ವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಒಟ್ಟು 1,414 ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ನೋಂದಣಿ ಅಥವಾ ನೈಸರ್ಗಿಕೀಕರಣದ ಮೂಲಕ ಭಾರತೀಯ ಪೌರತ್ವ ನೀಡಲಾಗಿದೆ.
CAA, NRC ಮತ್ತು NPR ದೇಶಾದ್ಯಂತ ಪ್ರತಿಭಟನೆಯ ಬಿರುಗಾಳಿ ಎಬ್ಬಿಸಿತ್ತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಪ್ರತಿಭಟನೆಗಳು ಅಂತ್ಯಗೊಂಡವು. ಪ್ರತಿಭಟನೆ ನಿಲ್ಲುವ ಮೊದಲು ದೇಶದಾದ್ಯಂತ ಹೊರತರಬೇಕಾಗಿದ್ದ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಕೇಂದ್ರವು ತಡೆಹಿಡಿಯಿತು.
Advertisement. Scroll to continue reading.