ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಹೊಟೆಲ್ ಒಂದರಲ್ಲಿ ವಸ್ತು ಸ್ಫೋಟಗೊಂಡು ಮೂವರು ಸಿಬ್ಬಂದಿ ಸೇರಿ ಐವರು ಗಂಭೀರ ಗಾಯಗೊಂಡ ಘಟನೆ ವೈಟ್ಫೀಲ್ಡ್ ಸಮೀಪದ ಕುಂದಲಹಳ್ಳಿ ಗೇಟ್ ಬಳಿಯ ಬಸ್ ನಿಲ್ದಾಣದ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದಿದೆ.
ಆರಂಭದಲ್ಲಿ ಇದು ಸಿಲಿಂಡರ್ ಸ್ಫೋಟ ಘಟನೆ ಇರಬಹುದು ಎಂದು ಭಾವಿಸಲಾಗಿತ್ತಾದರೂ, ಈ ಸ್ಫೋಟಕ್ಕೆ ನಿಖರ ಕಾರಣ ಏನು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಹೀಗಾಗಿ, ಈ ನಿಗೂಢ ಸ್ಫೋಟ ಘಟನೆಯ ತನಿಖೆ ಕೂಡಾ ಈಗಾಗಲೇ ಚುರುಕುಗೊಂಡಿದೆ. ಸ್ಫೋಟ ಘಟನೆಯ ಗಾಯಾಳುಗಳಿಗೆ ಬೆಂಗಳೂರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಹೋಟಲ್ನಲ್ಲಿ ಇದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.
ಸ್ಫೋಟದ ವೇಳೆ ಭಾರೀ ತೀವ್ರತೆಯ ಸದ್ದು ಕೇಳಿಸಿದ್ದು, ಅಕ್ಕಪಕ್ಕದ ಅಂಗಡಿ, ಮುಂಗಟ್ಟು ಹಾಗೂ ಕಚೇರಿಗಳ ಜನರು ಸ್ಥಳಕ್ಕೆ ಧಾವಿಸಿದರು. ಸ್ಫೋಟದ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿದ್ದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿತು. ಸ್ಥಳೀಯ ಪೊಲೀಸರೂ ಕೂಡಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣೆ ಹಾಗೂ ಗುಂಪು ಚೆದುರಿಸುವ ಕೆಲಸದಲ್ಲಿ ತೊಡಗಿದ್ದರು.
Advertisement. Scroll to continue reading.
.