ರಾಷ್ಟ್ರೀಯ

ಸಿಎಎಯಲ್ಲಿ ಯಾರ ಪೌರತ್ವ ಕಸಿದುಕೊಳ್ಳಲು ಅವಕಾಶ ಇಲ್ಲ: ಅಮಿತ್ ಶಾ

1

ನವದೆಹಲಿ: ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ. ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಯಾವುದೇ ಅವಕಾಶವಿಲ್ಲ. ಆದ್ದರಿಂದ ಅಲ್ಪಸಂಖ್ಯಾತರು ಅಥವಾ ಯಾವುದೇ ವ್ಯಕ್ತಿ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ನಿರ್ಧಾರ. ನಾವು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಎಎ ಅನುಷ್ಠಾನ ಮಾಡಲು ರಾಜ್ಯಗಳು ನಿರಾಕರಿಸಲು ಸಾಧ್ಯವಿಲ್ಲ. ಪೌರತ್ವ ನೀಡುವ ಅಧಿಕಾರ ಕೇಂದ್ರ ಸರ್ಕಾರ ಮಾತ್ರ ಇದೆ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಬೌದ್ಧರು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿ ನಿರಾಶ್ರಿತರಿಗೆ ಹಕ್ಕುಗಳು ಮತ್ತು ಪೌರತ್ವವನ್ನು ನೀಡುವುದು ಮಾತ್ರ ಸಿಎಎ ಉದ್ದೇಶ. ಸಿಎಎ ಮೂಲಕ ಬಿಜೆಪಿ ಹೊಸ ವೋಟ್ ಬ್ಯಾಂಕ್ ಸೃಷ್ಟಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಅವರು ಹೇಳುವುದನ್ನು ಅವರು ಎಂದಿಗೂ ಮಾಡುವುದಿಲ್ಲ ತಿರುಗೇಟು ನೀಡಿದರು.

Advertisement. Scroll to continue reading.

2019 ರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ CAA ತರುವುದಾಗಿ ಮತ್ತು ನೆರೆ ದೇಶಗಳ ನಿರಾಶ್ರಿತರಿಗೆ ಪೌರತ್ವ ನೀಡುವುದಾಗಿ ಹೇಳಿದೆ. 2019 ರಲ್ಲಿ ಸಂಸತ್ತು ಇದನ್ನು ಅಂಗೀಕರಿಸಿತು. ಆದರೆ ಕೋವಿಡ್‌ನಿಂದಾಗಿ ಅನುಷ್ಠಾನ ವಿಳಂಬವಾಯಿತು. ಪ್ರತಿಪಕ್ಷಗಳು ತುಷ್ಟೀಕರಣದ ರಾಜಕೀಯ ಮಾಡಲು ಬಯಸುತ್ತವೆ. ತಮ್ಮ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸಲು ಬಯಸುತ್ತವೆ ಎಂದು ಆರೋಪಿಸಿದರು.

ನಿರಾಶ್ರಿತರಿಗೆ ಪೌರತ್ವ ನೀಡುವುದರಿಂದ ಕಳ್ಳತನ ಮತ್ತು ಅತ್ಯಾಚಾರಗಳು ಹೆಚ್ಚಾಗುತ್ತವೆ ಎಂಬ ಕೇಜ್ರಿವಾಲ್ ಹೇಳಿಕೆಗೆ ತಿರುಗೇಟು ನೀಡಿದ ಅಮಿತ್ ಶಾ, ಅರವಿಂದ್ ಕೇಜ್ರಿವಾಲ್ ಶಾಂತತೆಯನ್ನು ಕಳೆದುಕೊಂಡಿದ್ದಾರೆ. ಬಾಂಗ್ಲಾ ರೋಹಿಂಗ್ಯಾ ನುಸುಳುಕೋರರ ಬಗ್ಗೆ ಏಕೆ ಅವರು ಮಾತನಾಡುವುದಿಲ್ಲ, ವಿರೋಧಿಸುವುದಿಲ್ಲ? ಅವರೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು‌.

ಇದು ಕೇಂದ್ರದ ವಿಷಯ, ರಾಜ್ಯದ್ದಲ್ಲ..

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಸಿಎಎಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿವೆ. ಆದರೆ ನಮ್ಮ ಸಂವಿಧಾನದ 11 ನೇ ವಿಧಿಯು ಸಂಸತ್ತಿಗೆ ಮಾತ್ರ ಪೌರತ್ವದ ನಿಯಮಗಳನ್ನು ಮಾಡುವ ಎಲ್ಲಾ ಅಧಿಕಾರಗಳನ್ನು ನೀಡುತ್ತದೆ. ಇದು ಕೇಂದ್ರದ ವಿಷಯ, ರಾಜ್ಯದ ವಿಷಯವಲ್ಲ. ಚುನಾವಣೆಯ ನಂತರ ಎಲ್ಲರೂ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ತುಷ್ಟೀಕರಣ ರಾಜಕಾರಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com