ಕರಾವಳಿ

ಚಿನ್ನದಾಸೆ ತೋರಿಸಿ ಪ್ರಾಣ ತೆಗೆದ 6 ಮಂದಿ ಬಂಧನ!

1

ಬೆಳ್ತಂಗಡಿ: ಕುಚ್ಚಂಗಿ ಕೆರೆಯಲ್ಲಿ  ಕಾರಿನಲ್ಲಿ ಮೂರು ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾರದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೃತಪಟ್ಟಿರುವ ಈ ಮೂವರೂ ತುಮಕೂರಿಗೆ ತೆರಳುವಾಗ ಬೇರೆ ಬೇರೆ ಮೂಲಗಳಿಂದ 50 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ ಹೋಗಿದ್ದರು ಎಂದು ಕುಟುಂಬ ಸದಸ್ಯರ ಮೂಲಗಳಿಂದ ತಿಳಿದುಬಂದಿದೆ. ಅತ್ತ ಕೋಲಾರ ಜಿಲ್ಲೆಯ ಕೋರಾ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆಗಿರುವ ಪ್ರಕರಣ ಆಧರಿಸಿ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೃತರ ಕರೆಗಳನ್ನು ಆಧರಿಸಿ ಈಗಾಗಲೇ ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Advertisement. Scroll to continue reading.

ನಕಲಿ ಚಿನ್ನದ ದಂಧೆ
ಮೂವರು ಕೂಡ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಅದರಲ್ಲಿ ಕೋಟ್ಯಂತರ ರೂ. ಚಿನ್ನದ ಗಟ್ಟಿಗಳಿವೆ. ನಮಗೆ ಅದನ್ನು ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ನೀವು ಬಂದರೆ ನಾವು ಅದನ್ನು ಕೇವಲ 50 ಲಕ್ಷ ರೂ. ಗಳಿಗೆ ನೀಡುತ್ತೇವೆ ಎಂದು ನಂಬಿಸಿರುವ ಸಾಧ್ಯತೆ ಕಂಡುಬಂದಿದೆ. ಚಿನ್ನದ ಆಸೆಗೆ ಈ ಮೂವರು ಬಾಡಿಗೆ ಕಾರಿನಲ್ಲಿ ತುಮಕೂರಿಗೆ ತೆರಳಿದ್ದು, ವ್ಯವಹಾರ ಕುದುರಿಸಿದ ಬಳಿಕ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾರಿನ ಢಿಕ್ಕಿಯಲ್ಲಿ ಇಬ್ಬರ ಮೃತದೇಹ ಹಾಗೂ ಹಿಂಬದಿ ಸೀಟಿನಲ್ಲಿ ಸಂಪೂರ್ಣ ಸುಟ್ಟ ರೀತಿಯಲ್ಲಿ ಮೃತದೇಹ ಸಿಕ್ಕಿರುವುದು ಕೊಲೆಗೆ ಬಲವಾದ ಸಾಕ್ಷಿಯಾಗಿದೆ. ಮೃತದೇಹವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದು ಬಳಿಕವಷ್ಟೆ ಹಸ್ತಾಂತರ ವಾಗಲಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದ್ದಡ್ಕ ರಫೀಕ್‌ ಮಾಲಕತ್ವದ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್‌ ನಿವಾಸಿ, ಆಟೋ ಚಾಲಕ ಶಾಹುಲ್‌ ಹಮೀದ್‌ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್‌ (56) ಮತ್ತು ಶಿರ್ಲಾಲು ಗ್ರಾಮದ ಸಿದ್ದಿಕ್‌ ಯಾನೆ ಇಮ್ತಿಯಾಝ್ (34) ಮೂವರು ಬಾಡಿಗೆ ಮಾಡಿಕೊಂಡು ತೆರಳಿದ್ದರು.

ಹುಚ್ಚಂಗಿ ಕೆರೆಯ ಬಳಿ ಮಧ್ಯದಲ್ಲಿ ಕಾರೊಂದು ಸುಟ್ಟ ಸ್ಥಿತಿಯಲ್ಲಿರುವುದನ್ನು ಕಂಡು ಜೆಸಿಬಿ ಕಾರ್ಮಿಕ ನಾಗರಾಜು ಅವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅಲ್ಲಿನ ಪೊಲೀಸ್‌ ಅಧಿಕಾರಿ, ಗುಪ್ತಚರ ವಿಭಾಗದ ಸಿಬಂದಿ ಚೇತನ್‌ ಕುಮಾರ್‌ ಅವರ ಜತೆ ಇಲಾಖಾ ವಾಹನದಲ್ಲಿ ತೆರಳಿ ಪರಿಶೀಲಿಸಿದಾಗ ಕೃತ್ಯ ಬಹಿರಂಗವಾಗಿತ್ತು. ಮದ್ದಡ್ಕದ ರಫೀಕ್‌ ಅವರಿಂದ ಇಸಾಕ್‌ ಅವರು 13 ದಿನಗಳ ಹಿಂದೆ ಬಾಡಿಗೆಗೆ ಕಾರು ಪಡೆದಿದ್ದರು. ಇತ್ತ ಮನೆಯವರಿಗೆ ಬೆಂಗಳೂರಿಗೆ ಹೋಗಿದ್ದಾರೆ ಎಂಬುದಷ್ಟೇ ಗೊತ್ತಿತ್ತು. ಆದರೆ ಮಾ.21 ರಂದು ರಾತ್ರಿಯ ನಂತರ ಕೋಲಾರದ ಕುಚ್ಚಂಗಿ ಕೆರೆಯ ಬಳಿ ದೊಡ್ಡ ಮಟ್ಟದ ಅನಾಹುತವೇ ನಡೆದಿತ್ತು. ಮೂವರನ್ನು ಕೈಕಾಲು ಕಟ್ಟಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಸಾಧ್ಯತೆಯೇ ಹೆಚ್ಚಾಗಿ ಕಂಡುಬಂದಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com