ಕುಂದಾಪುರ : 2021-22ನೇ ಸಾಲಿನ ಆಸ್ತಿ ತೆರಿಗೆ ನೀತಿಗೆ ಆಕ್ಷೇಪ; ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರಿಂದ ಮನವಿ ಸಲ್ಲಿಕೆ
Published
0
ಕುಂದಾಪುರ : ನಗರ ಸ್ಥಳೀಯ ಸಂಸ್ಥೆಗಳ 2021-22 ನೇ ಸಾಲಿನ ಆಸ್ತಿ ತೆರಿಗೆಗೆ ಮಾರ್ಗಸೂಚಿ ಬೆಲೆ ವಿಧಿಸಲು ಹೊರಟಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ಕುಂದಾಪುರ ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರು ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಗೆ ಮನವಿ ಸಲ್ಲಿಸಿದರು.
ಕೋವಿಡ್ ಮಹಾಮಾರಿಯಿಂದ ಜನತೆ ಜರ್ಜರಿತರಾಗಿದ್ದು, ಜತೆ ಕೈಯಲ್ಲಿ ಉದ್ಯೋಗವೂ ಇಲ್ಲದ ಸಂದರ್ಭದಲ್ಲಿ ಈ ಆಸ್ತಿ ತೆರಿಗೆ ಜಾರಿಗೊಳಿವುದು ಸೂಕ್ತವಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. 2005-06ರ ಆಸ್ತಿ ತೆರಿಗೆಯು ಚಾಲ್ತಿ ಇರುವ ಸಂದರ್ಭದಲ್ಲಿ ಪ್ರತಿ 3 ವರ್ಷಕ್ಕೊಮ್ಮೆ 15% ಏರಿಕೆ ಮಾಡಿದ್ದು, ಈಗಾಗಲೇ 4 ಬಾರಿ ಏರಿಕೆಯಾಗಿದೆ. ಸದ್ರಿ ವರ್ಷದಲ್ಲಿ 15% ಏರಿಕೆ ಮಾಡಿದ್ದಾಗಿರುತ್ತದೆ. 2018-19ರ ಆಸ್ತಿ ಮೌಲ್ಯದ ಪ್ರಕಾರ ತೆರಿಗೆಯನ್ನು ನಿಗದಿ ಪಡಿಸಿದ್ದಲ್ಲಿ ಜನರಿಗೆ ಈ ಬೆಲೆ ಏರಿಕೆ ಭಾರೀ ಹೊರೆಯಾಗುವುದು, ಅಲ್ಲದೇ, ಈ ಹಿಂದಿನ ಆಸ್ತಿ ತೆರಿಗೆಯನ್ನು ಹೋಲಿಸಿದಲ್ಲಿ ದುಪ್ಪಟ್ಟಾಗುವುದು. ಆದ್ದರಿಂದ ಈ ಆಸ್ತಿ ತೆರಿಗೆಯು ಜಾರಿಯಾದಲ್ಲಿ ಜನತೆಯು ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಕೂಡಲೇ ಆಸ್ತಿ ತೆರಿಗೆಯನ್ನು ಈ ಹಿಂದಿನ ಕ್ರಮದಂತೆ ವಿಧಿಸಬೇಕಾಗಿ ಕೋರುತ್ತೇವೆ. ಹೊಸ ತೆರಿಗೆಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಹಾಗೂ ಇಂದಿನ ವಿಶೇಷ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.