ಮಂಗಳೂರು: ಬಿಸಿಲ ಬೇಗೆ ಹೆಚ್ಚುತ್ತಿದೆ. ಮನುಷ್ಯರಿಗೆ ನೀರಿನ ದಾಹ ಹೆಚ್ಚಿದೆ. ಈ ನಡುವೆ ಪ್ರಾಣಿ-ಪಕ್ಷಿಗಳ ಪರಿಸ್ಥಿತಿ ಹೇಗಿರಬೇಡ? ಅವುಗಳ ದಣಿವನ್ನು ನೀಗಿಸಲು ನೀರು, ಆಹಾರದ ಅಗಯ್ಯವಿದೆ. ಇದನ್ನು ಮನಗಂಡಿರುವ ಗ್ಲೋಬಲ್ ಅಕಾಡೆಮಿಯ ನಿರ್ದೇಶಕ ಆಸ್ಪರ್ ರಝಕ್ ಮತ್ತು ಸಹ್ಯಾದ್ರಿ ಕಾಲೇಜಿನ ಡಾ. ಅನಂತ್ ಪ್ರಭು.ಜಿ ಅವರ ಪ್ರೇರಣೆಯಿಂದ DIY(Do-It-Yourself) ಮಾದರಿಯಲ್ಲಿ ಬರ್ಡ್ ಫೀಡರ್ ಸಿದ್ಧ ಪಡಿಸಲಾಗಿದೆ.
ಮೊದಲ ಬರ್ಡ್ ಫೀಡರ್ ಸ್ವೀಕರಿಸಿ ಮಾತಾಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಇದೊಂದು ಉತ್ತಮ ಪ್ಲಾನ್, ಇದು ಎಲ್ಲಾ ಕಡೆ ಪ್ರಚಾರವಾಗಿ ಪಕ್ಷಿಗಳಿಗೆ ಮಾನವರ ಪ್ರೀತಿ ದೊರಕಲಿ. ಕೆಲವೊಂದು ಪಕ್ಷಿಗಳು ಆಹಾರ ಇಲ್ಲದೇ ಬಳಲುವುದು ಮತ್ತು ಗಾಯಗೊಂಡು ನರಳುವುದು ಕೂಡಾ ಕಾಣಿಸುತ್ತದೆ. ಇದನ್ನು ಕಂಡವರು ಸೂಕ್ತ ಪರಿಹಾರಕ್ಕೆ ಶ್ರಮ ಪಡೋಣ” ಎಂದು ಕರೆ ನೀಡಿದರು.
ಈ ವೇಳೆ ಮಾತಾಡಿದ ಡಾ.ಅನಂತ್ ಪ್ರಭು.ಜಿ, ಇದೊಂದು ಸರಳ ಉಪಕರಣ ಆಗಿದ್ದು, ಯಾರೂ ಕೂಡಾ ತಮ್ಮ ಮನೆಯಲ್ಲಿ ಉಪಯೋಗ ಮಾಡಿ ಹಳೆಯದಾದ ಅಥವಾ ಉಪಯೋಗಕ್ಕೆ ಇಲ್ಲದ ವಸ್ತುಗಳಿಂದ ತಯಾರಿಸಲು ಸಾಧ್ಯ ಎಂದರು.
ರಝಕ್ ಮಾತನಾಡಿ, “ಬೇಸಿಗೆಯ ಬಿಸಿಯಲ್ಲಿ ಮನುಷ್ಯರೇ ಕಷ್ಟಪಡುತ್ತಿರುವಾಗ ಪಕ್ಷಿಗಳ ಪಾಡು ಹೇಳತೀರದು. ಹಾಗಾಗಿ ನಾವು ನಮಗೆ ಸಿಕ್ಕಿದ ಸ್ಥಳದಲ್ಲಿ ಪಕ್ಷಿಗಳಿಗೆ ನೀರು, ಆಹಾರ ನೀಡಿ ಮಾನವೀಯತೆ ಮೆರೆಯೋಣ” ಎಂದರು.