ಯುವವಾಹಿನಿ ಉಡುಪಿ ಘಟಕದ `ಅಮೂಲ್ಯ’ ಅನುಭವಗಳ ಅವಲೋಕನ ಕಾರ್ಯಕ್ರಮ
Published
0
ಉಡುಪಿ : ಸಾಮಾನ್ಯ ಸದಸ್ಯನಾಗಿ ಯುವವಾಹಿನಿಯನ್ನು ನಾನು ಸೇರಿಕೊಂಡೆ. ಇಂದು ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿರುವುದು ಖಷಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯುವಲ್ಲಿ ಶ್ರಮಿಸಬೇಕಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು ಹೇಳಿದರು. ಅವರು ಯುವವಾಹಿನಿ ಉಡುಪಿ ಘಟಕದ ವತಿಯಿಂದ `ಅಮೂಲ್ಯ’ ಅನುಭವಗಳ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಘಟಕದ ಅಧ್ಯಕ್ಷ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿಜ್ಞಾಪನಾ ಪತ್ರವನ್ನು ಘಟಕದ ಗೌರವ ಸಲಹೆಗಾರರಾದ ಶಂಕರ ಪೂಜಾರಿ ಕೊರಂಗ್ರಪಾಡಿಯವರು ಬಿಡುಗಡೆಗೊಳಿಸಿದರು. ಇತ್ತೀಚೆಗೆ ಮಂಗಳೂರು ಮಹಿಳಾ ಘಟಕದವರು ನಡೆಸಿದ ಕುಣಿತ ಭಜನೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದ ಘಟಕದ ಭಜನಾ ತಂಡವನ್ನು ಹಾಗೂ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಶಂಕರ ಪೂಜಾರಿಯವರನ್ನು ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಘಟಕದ ಪೂರ್ವಾಧ್ಯಕ್ಷರಾದ ಶಂಕರ ಪೂಜಾರಿ, ಯುವ ವಾಹಿನಿ ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕ ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ದೇಶಕ, ಘಟಕದ ಜೊತೆ ಕಾರ್ಯದರ್ಶಿ ಶ್ರೀ ದಯಾನಂದ ಕರ್ಕೇರ ಪ್ರಸ್ತಾವನೆಗೈದರು. ಶ್ರೀಮತಿ ಸಂಧ್ಯಾ ಅಶೋಕ್ ಹಾಗೂ ಶ್ರೀಮತಿ ಶಕುಂತಲಾ ಸುಕೇಶ್ ಕಾರ್ಯಕ್ರಮ ನಿರೂಪಿಸಿದರು. ಘಟಕದ ಮಹಿಳಾ ಸಂಚಾಲಕಿ ಕುಮಾರಿ ನವಿಷಾ ವಂದಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉರಗತಜ್ಞ ಗುರುರಾಜ್ ಸನಿಲ್ :
ಸಂಪನ್ಮೂಲ ವ್ಯಕ್ತಿಯಾಗಿ ಉರಗತಜ್ಞ ಗುರುರಾಜ್ ಸನಿಲ್ ಆಗಮಿಸಿದ್ದರು. ಸುಮಾರು 40ಕ್ಕೂ ಮಿಕ್ಕಿ ವಿಷ ರಹಿತ ಹಾಗೂ ವಿಷದ ಹಾವುಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಕೆಲವೊಂದು ಆಚರಣೆಗಳಿಗೆ ಸಮರ್ಥನೆಯನ್ನೂ ಕೆಲವೊಂದು ಮೂಢನಂಬಿಕೆಗಳಿಗೆ ವಿರೋಧವನ್ನೂ ವ್ಯಕ್ತಪಡಿಸಿದರು. ಕೊನೆಯಲ್ಲಿ ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನೀಡಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿ ಸಂಶಯ ನಿವಾರಿಸಿದರು.