ಕುಂದಾಪುರ : ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ತಾಲೂಕಿನ ಕೆದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಳ್ತೂರು ಗ್ರಾಮದಲ್ಲಿ ಜನವಸತಿ ಪ್ರದೇಶದ ಸಮೀಪ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಮುಂದಾಗಿದ್ದು ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲದೆ ಗುರುವಾರ ಏಕಾಏಕಿ ಕಾಮಗಾರಿ ನಡೆಸಲು ಮುಂದಾದಾಗ ಸ್ಥಳೀಯರು ಕಾಮಗಾರಿ ನಡೆಸಲು ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ, ಇಂಜಿನಿಯರ್ ರಾಜಶೇಖರ್ ಮತ್ತು ಪೌರಕಾರ್ಮಿಕರ ತಂಡ ಜೆಸಿಬಿಯೊಂದಿಗೆ ಸ್ಥಳಕ್ಕೆ ಕಾಮಗಾರಿ ನಡೆಸಲು ಬರುವಾಗಲೇ ಮುಖ್ಯ ರಸ್ತೆಯಲ್ಲಿಯೇ ಜಮಾಯಿಸಿದ ಸ್ಥಳೀಯರು ಕಾಮಗಾರಿ ನಡೆಸದಂತೆ ಪಟ್ಟು ಹಿಡಿದು ಪ್ರತಿಭಟಿಸಿದರು. ನಮ್ಮೂರಿಗೆ ಡಂಪಿಂಗ್ ಯಾರ್ಡ್ ಅಗತ್ಯವಿಲ್ಲ ಎಂದು ಕೆದೂರು, ಬೇಳೂರು,ಉಳ್ತೂರು ಗ್ರಾಮದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.
ಸ್ಥಳೀಯರಿಂದ ಶಾಸಕರಿಗೆ ದೂರು
ಸ್ಥಳೀಯ ಜನಪ್ರತಿನಿಧಿಗಳು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಿಯರ ಸಮಸ್ಯೆಗಳನ್ನು ತಿಳಿಸಿದರು. ಶಾಸಕರು ಕೂಡಲೇ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು.
ಪೊಲೀಸ್ ಹಿರಿಯ ಅಧಿಕಾರಿಗಳ ಮನವಲಿಕೆ
ಸ್ಥಳೀಯ ವಿರೋಧದ ನಡುವೆಯೂ ಕಾಮಗಾರಿ ನಡೆಸಲು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರಿಗಳು ಕಾಮಗಾರಿ ನಡೆಸುವ ಕುರಿತು ಕೋರ್ಟ್ ಆರ್ಡರ್ ತೋರಿಸಿ ಮುಂದಾದಾಗ ಸ್ಥಳೀಯರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಭೇಟಿ ನೀಡಿದ ವ್ರತ್ತ ನೀರಿಕ್ಷಕ ಅನಂತಪದ್ಮನಾಭ ಮಾತನಾಡಿ ಸ್ಥಳೀಯರನ್ನು ಸಮಾಧಾನಪಡಿಸಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ ಬಳಿಕ ಸ್ಥಳೀಯರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿದರು.
Advertisement. Scroll to continue reading.
ವರದಿ : ದಿನೇಶ್ ರಾಯಪ್ಪನಮಠ