ಕರಾವಳಿ

ಉಡುಪಿ : ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧತೆ: ಡಿಸಿ ಜಿ.ಜಗದೀಶ್

0
 ಉಡುಪಿ : ಜಿಲ್ಲೆಯಲ್ಲಿ ಪ್ರಸುತ ಕೋವಿಡ್ 2 ನೇ ಅಲೆಯು ಕಡಿಮೆಯಾಗುತ್ತಿದ್ದು, ಮುಂದೆ ಕೋವಿಡ್ 3 ನೇ ಅಲೆ ಕಂಡುಬರುವ ಸಾಧ್ಯತೆಗಳ ಹಿನ್ನಲೆಯಲ್ಲಿ ಈಗಿನಿಂದಲೇ ಅದನ್ನು ಎದುರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವ ಅಗತ್ಯವಿದ್ದು ಈ ಬಗ್ಗೆ ಜಿಲ್ಲೆಯ ವೈದ್ಯಕೀಯ ಪರಿಣಿತರ ತಂಡದ ಸದಸ್ಯರು  ಸೂಕ್ತ ಯೋಜನೆ ರೂಪಿಸಲು  ತಮ್ಮ ಸಲಹೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
  ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ  ಮೆಡಿಕಲ್ ಎಕ್ಸ್‍ಪರ್ಟ್ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಕೋವಿಡ್ ಮೊದಲನೇ ಅಲೆಯು 60 ವರ್ಷ ಮೇಲ್ಟಟ್ಟವರಲ್ಲಿ ಕಂಡು ಬಂದಿದ್ದು,  ಎರಡನೇ ಅಲೆಯು 30 ರಿಂದ 55 ವರ್ಷದ ವಯೋಮಾನದವರಿಗೆ ಹೆಚ್ಚು ಕಂಡುಬಂದಿದ್ದು, ಪ್ರಸ್ತುತ ಈ ಎಲ್ಲಾ  ವಯೋಮಿತಿಯವರಿಗೆ ಲಸಿಕೆ ನೀಡಲಾಗುತ್ತಿದ್ದು,   3ನೇ ಅಲೆಯು 18 ಕ್ಕಿಂತ ಕಡಿಮೆ ವಯೋಮಿತಿಯವರಲ್ಲಿ ಕಂಡು ಬರುವ ಸಂಭಾವ್ಯತೆಗಳಿದ್ದು, ಕೋವಿಡ್ ಮೊದಲನೇ ಮತ್ತು 2ನೇ ಅಲೆಯಲ್ಲಿ,  ಮಕ್ಕಳಿಗೆ ಸೋಂಕು ಹರಡಿರುವ ಪ್ರಮಾಣ ಶೇ.3 ರಷ್ಟು ಮಾತ್ರ ಇದ್ದು, ಮಕ್ಕಳಿಗೆ 3ನೇ ಅಲೆ ಹರಡುವ ಕುರಿತು ಸ್ಪಷ್ಟ ಚಿತ್ರಣ ಇಲ್ಲವಾದರೂ ಸಹ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. 
   3ನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಅಗತ್ಯವಿರುವ ಬೆಡ್ ಗಳ ಸಂಖ್ಯೆಯನ್ನು ಈಗಲೇ ಗುರುತಿಸಿಕೊಳ್ಳಬೇಕು, ಸಾಧ್ಯವಾದಲ್ಲಿ  ಬೆಡ್ ಗಳ ಸಂಖ್ಯೆಯನ್ನು ಹೆಚ್ಚುಮಾಡಬೇಕು, ಅಗತ್ಯ ವೈದ್ಯಕೀಯ ಮೂಲ ಸೌಕರ್ಯಗಳನ್ನು  ಸಿದ್ದವಾಗಿಟ್ಟುಕೊಳ್ಳಬೇಕು , ಅಷ್ಟರಲ್ಲಿ ಮಕ್ಕಳಿಗೆ ಲಸಿಕೆ ದೊರೆತರೆ  ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ  ಎಂದು ತಜ್ಞರ ಸಮಿತಿ ಅಭಿಪ್ರಾಯ  ವ್ಯಕ್ತಪಡಿಸಿತು.
ಕೋವಿಡ್ 3 ನೇ ಅಲೆಯು ಮಕ್ಕಳಿಗೆ ಭಾದಿಸಿದ್ದಲ್ಲಿ, ಈ ಬಗ್ಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಗಳಿಗೆ, ಮಕ್ಕಳಿಂದ ಸ್ವಾಬ್ ಸಂಗ್ರಹ ಸೇರಿದಂತೆ ಅಗತ್ಯ ತರಬೇತಿ ನೀಡಿ ಸಿದ್ದಪಡಿಸಿಟ್ಟುಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಮಕ್ಕಳಿಗೆ ಚಿಕಿತ್ಸೆ ನೀಡುವ ವಿಧಾನಗಳ ಕುರಿತ ಕೈಪಿಡಿಯನ್ನು ಸಿದ್ದಪಡಿಸುವಂತೆ ತಿಳಿಸಿದರು.
  ಜಿಲ್ಲೆಯಲ್ಲಿ ಮಕ್ಕಳ ಸ್ನೇಹಿ ಕೋವಿಡ್ ಕೇರ್ ಸೆಂಟರ್ ಸಿದ್ದಮಾಡಿಟ್ಟುಕೊಳ್ಳಬೇಕು, ,  ಅಗತ್ಯವಿದ್ದಲ್ಲಿ ಮಕ್ಕಳ ಜೊತೆಗೆ ಪೋಷಕರು ತಂಗಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು, ಮಕ್ಕಳ ಮಾಸ್ಕ್‍ಗಳ ದಾಸ್ತಾನು  ಸಂಗ್ರಹ ಸಿದ್ದವಿರಲಿ.  ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 107 ಬೆಡ್ ಗಳನ್ನು  ಮಕ್ಕಳ ಚಿಕಿತ್ಸೆಗೆ ಗುರುತಿಸಲಾಗಿದೆ, ವೈದ್ಯಕೀಯ ಉಪಕರಣಗಳನ್ನು ಖರೀದಿಸುವಾಗ ಮಕ್ಕಳಿಗೆ ಕೋವಿಡ್ ಚಿಕಿತ್ಸೆಗೆ ಮಾತ್ರವಲ್ಲದೇ, ಮುಂದಿನ ದಿನಗಳಲ್ಲಿ ಸಹ ಮಕ್ಕಳ ಇತರೇ ಯಾವುದೇ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದಂತಹ ಬಹುಪಯೋಗಿ ಉಪಕರಣಗಳನ್ನು ಖರೀದಿಸಿ, ಇದರಿಂದ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯಕ್ಕಾಗಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗುತ್ತವೆ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.  
ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ನಿಂದ ಮೃತಪಟ್ಟವರು ಡೆತ್ ಅನಾಲಿಸಿಸ್ ಮಾಡಿ ವರದಿಯನ್ನು  ನೀಡಿ, ಇದರಿಂದ ಸೋಂಕಿತರ ಹಿನ್ನಲೆ, ಮರಣದ ಕಾರಣಗಳು ಇನ್ನಿತರ ವಿವರಗಳು ಸಂಪೂರ್ಣವಾಗಿ ದೊರೆಯಲಿದ್ದು, ಇದರಿಂದ ಜಿಲ್ಲೆಯಲ್ಲಿ  ಮುಂದೆ ಕೋವಿಡ್ ಸಾವುಗಳು ಸಂಭವಿಸದಂತೆ ಮುಂಜಾಗ್ರತೆಯಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂದರು. ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಐ.ಎಂ.ಎ ವತಿಯಿಂದ ಸಹ ಈ ಕಾರ್ಯಕ್ರಮಕ್ಕೆ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.    
 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿನಿಂದಲೇ ಮಕ್ಕಳ ಸ್ನೇಹಿಯಾಗಿ ಅವರ ದಿನನಿತ್ಯದ ಆರೋಗ್ಯ ಪರಿಶೀಲನೆ, ಮಕ್ಕಳ ಪಲ್ಸ್ ಆಕ್ಸಿಮೀಟರ್ ಬಳಕೆ ವಿಧಾನಗಳ ಬಗ್ಗೆ ತರಬೇತಿ ನೀಡಿ ಸಿದ್ದಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‍ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಡಾ. ಪ್ರೇಮಾನಂದ ಹಾಗೂ ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು. 

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com