ಕಲ್ಬುರ್ಗಿ : ಹಿರಿಯ ಸಾಹಿತಿ, ಚಿಂತಕ ಪ್ರೊ. ವಸಂತ ಕುಷ್ಟಗಿ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಕ್ತದೊತ್ತಡ ಕಡಿಮೆಯಾಗಿದ್ದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಕಲ್ಬುರ್ಗಿ ಮೂಲದ ವಸಂತ ಕುಷ್ಟಗಿ ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದರು. ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಸಾಹಿತ್ಯ ಲೋಕಕ್ಕೆ ಕೊಡುಗೆ
ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕುಷ್ಟಗಿ ಅವರು ಅಗಾಧ ಕೃಷಿ ಮಾಡಿದ್ದಾರೆ. ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, ಹೋರಾಟಗಾರರಾಗಿಯೂ ಕುಷ್ಟಗಿ ಪ್ರಸಿದ್ಧರು. 60ಕ್ಕೂ ಹೆಚ್ಚು ಕೃತಿಗಳನ್ನು ಅವರು ನೀಡಿದ್ದಾರೆ. 8 ಕವನ ಸಂಕಲನ, ಮೂವತ್ತಕ್ಕೂ ಹೆಚ್ಚು ಗದ್ಯ ಸಂಕಲನ, 15 ಕ್ಕೂ ಹೆಚ್ಚು ಸಂಪಾದನಾ ಕೃತಿಗಳು ಮೊದಲಾದವು ಅವರ ಸಾಹತ್ಯ ಕೃಷಿಯ ಪಟ್ಟಿಯಲ್ಲಿವೆ. ಭಕ್ತಿಗೋಪುರ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ, ಅಪ್ ಅಂಡ್ ಡೌನ್ ಪ್ರಮುಖ ಕೃತಿಗಳು. ದಿವಂಗತ ಎನ್. ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕುಷ್ಟಗಿ ಪಡೆದಿದ್ದರು. ಒಂದು ಬಾರಿ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 2019ರಲ್ಲಿ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವ ವಿಚಾರದಲ್ಲಿ ಪ್ರೊ.ವಸಂತ ಕುಷ್ಟಗಿ ಅವರ ಹೆಸರು ಮುಂಚೂಣಿಯಲ್ಲಿತ್ತು.
Advertisement. Scroll to continue reading.