ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ರಾಷ್ಟ್ರಾಧ್ಯಕ್ಷರಲ್ಲಾಗಲಿ, ರಾಜ್ಯಾಧ್ಯಕ್ಷರಲ್ಲಾಗಲಿ ಅಥವಾ ಮುಖ್ಯಮಂತ್ರಿಗಳಲ್ಲಾಗಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಿನ್ನೆ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯಕ್ರಮದಲ್ಲಿ ದೇವರಾಜು ಅರಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು, ಹೈಕಮಾಂಡ್ ನನಗೆ ಸಹಮತ ಕೊಟ್ಟು ನಾನೊಬ್ಬ ಒಳ್ಳೆ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗೆ ನಿಂತು ಕರ್ನಾಟಕ ರಾಜ್ಯವನ್ನು ಕೊರೋನಾ ಮುಕ್ತವಾಗಿಸುವುದು ನಮ್ಮ ಗುರಿ. ಅದರತ್ತ ಯಶಸ್ವಿ ಹೆಜ್ಜೆ ಇಡುತ್ತಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಸ್ಪಷ್ಟನಎ ನೀಡಿದ್ದಾರೆ, ಕುಂದಾಪುರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದರು.
ಸಿಡಿಲು, ಮಿಂಚು ಸಹಜ
Advertisement. Scroll to continue reading.
ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೀಶ್ವರ್ ವಿರುದ್ಧ ಹೈಕಮಾಂಡ್ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಕೆಲವು ಗುಡುಗು, ಸಿಡಿಲು, ಮಿಂಚು ಬರುತ್ತಿರುತ್ತದೆ. ಕೊನೆಗೆ ತಣ್ಣನೆ ಮಳೆ ಬಂದು ವಾತಾವರಣ ತಿಳಿಯಾಗುತ್ತದೆ. ಹಾಗಾಗಿ ರಾಜಕೀಯದಲ್ಲಿ ಸಣ್ಣ, ಪುಟ್ಟ ಅಪಸ್ವರಗಳು ಎದ್ದಾಗ ರಾಜ್ಯಾಧ್ಯಕ್ಷರು ಕರೆದು ತಿಳಿವಳಿಕೆ ಹೇಳುತ್ತಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಹೇಳಿದ್ದಾರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರೆಯಲಿದ್ದಾರೆ. ಇದರಲ್ಲಿ ಗೊಂದಲವಿಲ್ಲ. ರಾಜ್ಯದ ಜನತೆಗೆ ಸುಭದ್ರ ಆಡಳಿತ ನೀಡಲಿದ್ದೇವೆ ಎಂದರು.
ಲಾಕ್ ಡೌನ್ ಸಡಿಲಗೊಳಿಸಲು ಚಿಂತನೆ
ಪಾಸಿಟಿವಿಟಿ ರೇಟ್ 10 ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ, ಸೀಮಿತ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು, ಜನರ ಬದುಕಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸ್ವಲ್ಪ ಸಡಿಲಗೊಳಿಸಬಹುದಾ ಎಂದು ಯೋಚಿಸುತ್ತಿದ್ದೇವೆ. ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದರು.
Advertisement. Scroll to continue reading.