ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸಮುದಾಯ ಭವನದ ವಿಸ್ತರಣಾ ಕಾಮಗಾರಿಗೆ ಶಾಸಕ ಸುನೀಲ್ ಕುಮಾರ್ ಅವರಿಂದ ಶಿಲಾನ್ಯಾಸ
Published
0
ಹೆಬ್ರಿ : ಹೆಬ್ರಿ ಶ್ರೀನಾರಾಯಣ ಗುರು ಸಮಾಜ ಸೇವಾ ಸಂಘದ ಸಮುದಾಯ ಭವನವು ಈಗಿನ ವ್ಯವಸ್ಥೆಗೆ ಬೇಕಾದಂತೆ ನಿರ್ಮಾಣ ಮಾಡಬೇಕಿದ್ದು, 1.25 ಕೋ.ವೆಚ್ಚದ ಸಮುದಾಯ ಭವನದ ವಿಸ್ತರಣಾ ಕಾಮಗಾರಿಕೆಗೆ ಮೊದಲ ಹಂತದಲ್ಲಿ 35 ಲಕ್ಷ ಅನುದಾನ ನೀಡಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಅನುದಾನ ನೀಡುತ್ತೇನೆ. ಅತೀ ಶೀಘ್ರವಾಗಿ ಕಟ್ಟಡ ನಿರ್ಮಾಣ ಆಗಲಿ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು. ಅವರು ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸಮುದಾಯ ಭವನದ ವಿಸ್ತರಣಾ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹೆಬ್ರಿ ಸಂಘದ ಮೂಲಕ ಸಮುದಾಯದ ಸೇವೆಯ ಜೊತೆಗೆ ಇನ್ನಷ್ಟು ಮಾದರಿ ಕಾರ್ಯಗಳು ನಡೆಯಲಿ. ಸಮಾಜದ ಎಲ್ಲರ ಜೊತೆಗೆ ನಾನು ಇದ್ದೇನೆ ಎಂದು ಭರವಸೆ ನೀಡಿದರು. ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್.ಜಯಕರ ಪೂಜಾರಿ ಮಾತನಾಡಿ, ಶಾಸಕ ಸುನೀಲ್ ಕುಮಾರ್ ನಮ್ಮ ನಾಯಕರು, ಹೆಬ್ರಿಯ ಸಂಘದ ಅಭಿವೃದ್ಧಿಗೆ ನಮ್ಮ ನಿರೀಕ್ಷೆ ಮೀರಿ ಸಹಕಾರ ನೀಡಿದ್ದಾರೆ. ನಮ್ಮ ಜೊತೆಗೆ ಶಾಸಕರು ಇದ್ದಾರೆ. ಶಾಸಕರ ಜೊತೆಯಲ್ಲಿ ನಮ್ಮ ಸಮುದಾಯ ಇದೆ ಎಂದರು.
ತಾಣ ರಮೇಶ್ ಭಟ್ ಧಾರ್ಮಿಕ ವಿಧಿ ವಿದಾನ ನೆರವೇರಿಸಿದರು. ಈ ಸಂದರ್ಭ ಹೆಬ್ರಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು, ಉದ್ಯಮಿ ಎಚ್.ಸತೀಶ್ ಪೈ, ಗುರುದಾಸ ಶೆಣೈ, ಸಂಘದ ಪ್ರಮುಖರಾದ ಮುದ್ದು ಪೂಜಾರಿ, ಪ್ರಭಾಕರ ಪೂಜಾರಿ, ಬೇಳಂಜೆ ಹರೀಶ್ ಪೂಜಾರಿ, ಬೋಜ ಪೂಜಾರಿ ಬೈದರಬೆಟ್ಟು, ಸುರೇಶ ಪೂಜಾರಿ, ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.