ಕುಂದಾಪುರ : ವಿದ್ಯುತ್ ಇಲ್ಲದೆ ಕ್ಯಾಂಡಲ್, ಮೊಬೈಲ್ ಟಾರ್ಚ್ ಹಿಡಿದು ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಇರುವ ಮನೆಗೆ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳ ಓದಿಗೆ ನೆರವಾಗಿದ್ದಾರೆ. ಉಡುಪಿ ಜಿಲ್ಲೆಯ ಉಪ್ಪುಂದದ ಅರೆಕಲ್ಲು ಮನೆ, ಮೆಡಿಕಲ್ ರೋಡ್ ನಿವಾಸಿಯಾದ ಗುಲಾಬಿ ಪೂಜಾರ್ತಿ ಅವರ ನಿವಾಸಕ್ಕೆ ಎಷ್ಟು ಪ್ರಯತ್ನಿಸಿದರೂ ದಾಖಲೆಯ ಸಮಸ್ಯೆಯಿಂದ ವಿದ್ಯುತ್ ಸಿಗಲಿಲ್ಲ. ಪತಿ ಪತ್ನಿ ಕಷ್ಟಪಟ್ಟು ದುಡಿದು ಬದುಕು ಸಾಗಿಸುತ್ತಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ವಿದ್ಯುತ್ ಇಲ್ಲದೆ ಕ್ಯಾಂಡಲ್, ಮೊಬೈಲ್ ಟಾರ್ಚ ಹಿಡಿದು ಕಷ್ಟಪಟ್ಟು ಓದುತ್ತಿದ್ದರು.
ಈ ವಿದ್ಯಾರ್ಥಿನಿಯರು ಓದಿಗಾಗಿ ಅನುಭವಿಸುತ್ತಿರುವ ಬವಣೆ ಸೆಲ್ಕೋ ಸೋಲಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಅವರ ಗಮನಕ್ಕೆ ಬರುತ್ತಿದ್ದಂತೆ ಕಂಪನಿಯ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ಸೆಲ್ಕೋ ಸೋಲಾರ್ ಕಂಪನಿಯ ಡಿಜಿಎಂ ಶ್ರೀ ಗುರುಪ್ರಕಾಶ ಶೆಟ್ಟಿ, ವಲಯ ವ್ಯವಸ್ಥಾಪಕ ಶೇಖರ ಶೆಟ್ಟಿ, ವ್ಯವಸ್ಥಾಪಕರಾದ (ಕುಂದಾಪುರ) ಶ್ರೀ ಮಂಜುನಾಥ್ ಅವರ ನಿವಾಸದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿ ದೀಪ ಬೆಳಗಿಸಿದ್ದಾರೆ.
ಈ ಸಂದರ್ಭ ಹರೀಶ್ ಹಂದೆ, ಮೋಹನ ಹೆಗಡೆ, ಜಗದೀಶ್ ಪೈ, ಗುರುಪ್ರಕಾಶ್ ಶೆಟ್ಟಿ ಹಾಗೂ ಸ್ಥಳೀಯ ಕುಂದಾಪುರ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement. Scroll to continue reading.