ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು: ಉಪ್ಪುಂದ ಗ್ರಾಮದ ಕಾಸನಾಡಿ ಎಂಬಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ‘ಶ್ರೀ ವರಲಕ್ಷ್ಮೀ” ನೂತನ ಗೃಹದ ಹಸ್ತಾಂತರ ಸಮಾರಂಭ ಶನಿವಾರ ನಡೆಯಿತು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರ ಪೋಷಕರಾದ ಮಂಜಮ್ಮ- ಬಾಬು ಪೂಜಾರಿ ದಂಪತಿಗಳು ನೂತನ ಗೃಹ ಉದ್ಘಾಟಿಸಿದರು. ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ಗೋವಿಂದ ಪೂಜಾರಿ ಅವರು ನೂತನ ಗೃಹದ ಯಜಮಾನರಾದ ವಿಜಯಾ ರಮೇಶ್ ಪೂಜಾರಿ ಅವರಿಗೆ ಬೀಗದ ಕೈ ಹಸ್ತಾಂತರಿಸಿದರು.
Advertisement. Scroll to continue reading.
ಬಳಿಕ ಮಾತನಾಡಿದ ಗೋವಿಂದ ಬಾಬು ಪೂಜಾರಿ, ಟ್ರಸ್ಟ್ ಮೂಲಕ ನಿರ್ಮಿಸಲಾಗಿರುವ ಎರಡನೇ ಮನೆ ಇದಾಗಿದ್ದು, ಇನ್ನು ಎರಡು ಮನೆಗಳು ನಿರ್ಮಾಣ ಹಂತದಲ್ಲಿವೆ. ಆರೋಗ್ಯ ಸೇವೆ, ಅಗತ್ಯವುಳ್ಳವರಿಗೆ ನೆರವು, ಪುಡ್ ಕಿಟ್ ವಿತರಣೆ ಸೇರಿದಂತೆ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಟ್ರಸ್ಟ್ ಮೂಲಕ ಮಾಡಲಾಗುತ್ತಿದೆ ಎಂದರು.
ನೂತನ ಗೃಹದ ಯಜಮಾನರಾದ ವಿಜಯಾ ರಮೇಶ್ ಪೂಜಾರಿ ದಂಪತಿ ಮಾತನಾಡಿ, ಮನೆಯನ್ನು ಪೂರ್ಣಗೊಳಿಸಲು ಆರ್ಥಿಕ ಅಡಚಣೆ ಉಂಟಾದಾಗ ಗೋವಿಂದ ಬಾಬು ಪೂಜಾರಿ ಅವರಿಗೆ ಮನವಿ ಮಾಡಿಕೊಂಡಿದ್ದೆವು. ಅದರಂತೆ ಅಣ್ಣನ ಸ್ಥಾನದಲ್ಲಿ ನಿಂತು ಮನೆಯನ್ನು ಪೂರ್ಣಗೊಳಿಸಿಕೊಟ್ಟಿದ್ದಾರೆ. ಅವರಿಗೆ ಋಣಿಯಾಗಿರುತ್ತೇವೆ ಎಂದರು.
ಈ ಸಂದರ್ಭ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ನ ಎಂಡಿ ಸುಧಾಕರ್ ಆರ್. ಪೂಜಾರಿ, ಜ್ಯೋತಿಷಿಗಳಾದ ರಘುನಾಥ ಜೋಯಿಸ್, ಶ್ರೀನಿವಾಸ ಉಬ್ಜೇರಿ, ಎನ್.ಎ. ಪೂಜಾರಿ, ಜಯರಾಮ ಶೆಟ್ಟಿ ಬಿಜೂರು, ಗುರುರಾಜ ಪಂಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.