ಕಾಪು : ತೆಂಕ ಎರ್ಮಾಳು ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಿಲೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ ರಸ್ತೆಯಂಚಿನ ಬಾಂಡ್ ಕಲ್ಲೊಂದಕ್ಕೆ ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಮೃತ ಯುವಕ ಬೆಳಪು ಪ್ರಸಾದ ನಗರ ನಿವಾಸಿ ಅಬ್ದುಲ್ (25) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಇವರು, ಪಡುಬಿದ್ರಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಉಚ್ಚಿಲ ಕಡೆಗೆ ಬರುತ್ತಿದ್ದ ವೇಳೆ ನವಿಲೊಂದು ಹಾರಿಕೊಂಡು ಬಂದು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ನವಿಲು ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಅಬ್ದುಲ್ ಜೀವನ್ಮರಣ ಹೋರಾಟದಲ್ಲಿದ್ದು, ಆಂಬ್ಯುಲೆನ್ಸ್ ಬರಲು ವಿಳಂಬವಾದ ಹಿನ್ನೆಲೆ ಸ್ಥಳೀಯ ಕಾರ್ತಿಕ್ ಎಂಬ ಯುವಕ ತನ್ನ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರಾದರೂ ಅಷ್ಟರಲ್ಲೇ ಅವರು ಮೃತ ಪಟ್ಟಿದ್ದಾರೆ.