ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳಾಗಿ ತಮ್ಮ ಅನುಭವದ ವಿಚಾರಧಾರೆಯ ಮೇರೆಗೆ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಉಸ್ತುವಾರಿ ಮಂತ್ರಿಗಳಿಗೆ ತಮ್ಮ ತಮ್ಮ ಜಿಲ್ಲೆ ಹಾಗೂ ಅವರವರ ಕ್ಷೇತ್ರದ ಬಗ್ಗೆ ಗಮನ ಕೊಡಲು ಹೇಳಿದ್ದಾರೆ. ಕೋವಿಡ್ ನಿಯಂತ್ರಣವೂ ಸೇರಿದಂತೆ ಅಭಿವೃದ್ಧಿಗಳ ಬಗೆಗೆ ಹೆಚ್ಚು ಗಮನ ಕೊಡುವ ಅವಶ್ಯಕತೆ ಇದೆ. ನಾವು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ. ಪಾರ್ಟಿಯಲ್ಲಿ ಏನಾದರೂ ನಾಯಕ, ನಾಯಕತ್ವದ ಚರ್ಚೆಗಳು ಬಂದಾಗ ನಳಿನ್ ಕುಮಾರ್ ಅವರು ಹಾಗೂ ರಾಷ್ಟ್ರೀಯ ಅಧ್ಯಕ್ಷರು, ಹೈಕಮಾಂಡ್ ಅದರ ಬಗ್ಗೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೋಟ – ಪಡುಕರೆ – ಕೋಡಿ – ಕನ್ಯಾಣದ ರಸ್ತೆ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮ ಒಬ್ಬ ಅತ್ಯುತ್ತಮ ಆಡಳಿತ ಕೊಡೋ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಪಾರ್ಟಿಯ ಸಂಘಟನೆ ಇದೆ. ಎಲ್ಲಾ ಶಾಸಕರು, ಎಂಪಿ, ಮಂತ್ರಿಗಳೆಲ್ಲಾ ನಮ್ಮ ನಮ್ಮ ನಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದೇವೆ ಎಂದರು.
ಮೀನುಗಾರರ ಸಮಸ್ಯೆಗೆ ಶಕ್ತಿ ಮೀರಿ ಸಹಾಯ:
ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮಿತ್ರರ ವಾಸ್ತವಿಕತೆಯತೆ ಮರೆಮಾಚಬಾರದು. ಬಿಜೆಪಿ ಸರ್ಕಾರ ಮೀನುಗಾರರ ಎಲ್ಲಾ ಸವಲತ್ತುಗಳ ಬಗ್ಗೆ ಶಕ್ತಿ ಮೀರಿ ಸಹಕಾರ ಕೊಟ್ಟಿದೆ. ಸಹಾಯ ಮಾಡಿದೆ. ನಾನು ಮೀನುಗಾರಿಕಾ ಸಚಿವರಾಗಿದ್ದ ವೇಳೆ ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರು ಬಂದರಿಗಾಗಿ, ಕೋವಿಡ್ ಸಂದರ್ಭದಲ್ಲೂ 181 ಕೋ.ರೂ. ಬಿಡುಗಡೆ ಮಾಡಿ, ಟೆಂಡರ್ ಮಾಡಿ, ಮುಖ್ಯಮಂತ್ರಿಗಳೇ ಶಿಲಾನ್ಯಾಸ ಮಾಡಿದ್ದಾರೆ. ಇದು ಐತಿಹಾಸಿಕ ವಿಚಾರ. ಕೋಡಿ ಕನ್ಯಾಣದಲ್ಲಿರುವ ಜಟ್ಟಿ, ಹೂಳೆತ್ತುವ ಕಾಮಗಾರಿ ಸಿ ಆರ್ ಝಡ್ ಹಾಗೂ ಹಸಿರು ಪೀಠದ ಸಮಸ್ಯೆಯಿಂದಾಗಿ ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿತ್ತು. ಇದೀಗ ನಾನು, ಸಚಿವ ಅಂಗಾರ ಅವರು ಸೇರಿ ಅದರ ಹೂಳೆತ್ತುವ ಬಗ್ಗೆ ಯೋಜನೆಯನ್ನು ರೂಪಿಸುತ್ತಿದ್ದೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಪ್ರಥಮ ಹಂತದಲ್ಲೇ ಶಾಸಕರ ವಿನಂತಿ ಮೇರೆಗೆ 23,000 ಜನರಿಗೆ 60 ಕೋ. ಮಹಿಳಾ ಮೀನುಗಾರರ ಸಾಲಮನ್ನಾ ಮಾಡಿದ್ದಾರೆ. 22,000 ಜನರಿಗೆ ಈಗಾಗಲೇ ಸಿಕ್ಕಿದೆ. ತಾಂತ್ರಿಕ ಕಾರಣದಿಂದ ಒಂದೆರಡು ಸಾವಿರ ಮಂದಿಗೆ ಹೆಚ್ಚು ಕಡಿಮೆಯಾಗಿರಬಹುದು. ಅದನ್ನು ಪರಿಶೀಲಿಸಿ ಕೊಡುವ ಕೆಲಸವನ್ನು ಮಾಡುತ್ತೇವೆ. ಬಹಳ ವರ್ಷಗಳಿಂದ ಉಳಿತಾಯ ಪರಿಹಾರ ಯೋಜನೆಗಳು ನೆನೆಗುದಿಗೆ ಬಿದ್ದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಆ ಪರಿಹಾರ ಕೊಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಬೋಟ್ ಆಂಬುಲೆನ್ಸ್ ಮಾಡುವ ಬಗೆಗೂ ಪ್ರಸ್ತಾಪನೆ ನೀಡುತ್ತೇವೆ. ಮೀನುಗಾರರ ಪರವಾಗಿ ನಮ್ಮ ಸರ್ಕಾರ ಶಕ್ತಿ ಮೀರಿ ಕೆಲಸಗಳನ್ನು ಮಾಡುತ್ತಿದೆ ಎಂದರು.
ಬೈಂದೂರು ಕ್ಷೇತ್ರದಲ್ಲಿ ಹೆಚ್ಚು ಕಾಮಗಾರಿ :
ಅಂಗಾರ ಅವರು ಮೀನುಗಾರಿಕಾ ಸಚಿವರಾದ ಮೇಲೆ ಉಡುಪಿ ಮತ್ತು ಮಂಗಳೂರಿನಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ, ಅದಕ್ಕೆ ಬೇಕಾದ ಯೋಜನೆ, ಯೋಚನೆಯನ್ನು ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಉಳ್ಳಾಲದಿಂದ ಆರಂಭಿಸಿ ಬೈಂದೂರು ಒತ್ತಿನೆಣೆ ವರೆಗೆ ಹೆಚ್ಚು ಕಾಮಗಾರಿಗಳಾಗಿದ್ದಿದ್ದರೆ ಅದು ಬೈಂದೂರು ಕ್ಷೇತ್ರದಲ್ಲಿ. ಸಂಸದ ರಾಘವೇಂದ್ರ ಅವರು ಕ್ಷೇತ್ರದ ಪ್ರತಿನಿಧಿಯಾಗಿರುವುರಿಂದ ಹೆಚ್ಚು ಅನುಕೂಲಗಳಾಗಿವೆ. ಶಾಸಕರು, ಸಂಸದರ ಪರಿಶ್ರಮದಿಂದ ಹೆಚ್ಚು ಅನುದಾನಗಳು ಬಂದಿದೆ. ಕಾಮಗಾರಿ ಕಳಪೆಯಾಗಿರುವ ಬಗ್ಗೆ ಯೋಚಿಸಿ, ಸಚಿವ ಅಂಗಾರ ಅವರ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮಾಜಿ ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಪಂಟಣ ಪಂಚಾಯತ್ ಸಾಲಿಗ್ರಾಮ ಅಧ್ಯಕ್ಷೆ ಸುಲತ ಹೆಗ್ಡೆ, ವಿಠಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
